14ನೇ ಬ್ಲಾಕಿನಲ್ಲಿ ದ್ವಿಚಕ್ರ ವಾಹನ ಸ್ಕಿಡ್ : ಸವಾರನಿಗೆ ಗಾಯ

ದಾಂಡೇಲಿ : ನಗರದ 14 ನೇ ಬ್ಲಾಕಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದು, ಸವಾರ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಸ್ಥಳೀಯ ಮಾರುತಿನಗರದ 35 ವರ್ಷ ವಯಸ್ಸಿನ ಬಸವರಾಜ ರಂಗಪ್ಪ ಎಂಬವರೇ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದು ಗಾಯ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ನಗರದ ಸೋಮಾನಿ ವೃತ್ತದಿಂದ ದ್ವಿಚಕ್ರ ವಾಹನದಲ್ಲಿ ಮಾರುತಿ ನಗರದಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ 14ನೇ ಬ್ಲಾಕಿನ ಹತ್ತಿರ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿದೆ. ಈ ಸಂದರ್ಭದಲ್ಲಿ ಬಸವರಾಜ ರಂಗಪ್ಪ ಅವರು ರಸ್ತೆ ಪಕ್ಕದ ಗಟಾರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೆ ನಗರ ಸಭಾ ಸದಸ್ಯೆ ಯಾಸ್ಮಿನ್ ಕಿತ್ತೂರು ಅವರು ನಗರದ ಸಾರ್ವಜನಿಕ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯನ್ನು ಪಡೆದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಅವರು ಕೂಡಲೆ ಸ್ಥಳಕ್ಕೆ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸನ್ನು ಕಳುಹಿಸಿಕೊಟ್ಟು, ಗಾಯಗೊಂಡ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಕರೆ ತಂದು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.