ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ 4 ತಲೆಬುರುಡೆ ಪತ್ತೆ, ಬೆಚ್ಚಿಬಿದ್ದ ಜನ!

ಬೆಳಗಾವಿ (ಜು.1): ಮಹಾರಾಷ್ಟ್ರದ ಕೊಲ್ಲಾಪುರದ ಜನತೆಯನ್ನು ಬೆಚ್ಚಿ ಬೀಳಿಸುವ ಘಟನೆಯೊಂದು ಇಂದು ಬೆಳಕಿಗೆ ಬಂದಿದೆ. ಕಾಗಲ್ ತಾಲೂಕಿನ ಸಿದ್ದನೇರಳ್ಳಿಯಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದ್ದಂತೆ ನದಿ ಪಾತ್ರದಲ್ಲಿ ನಾಲ್ಕು ಮಾನವ ತಲೆಬುರುಡೆಗಳು ಪತ್ತೆಯಾಗಿವೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನಲ್ಲಿರುವ ಈ ಘಟನೆ ಬೆಳಕಿಗೆ ಬಂದಿದೆ. ಗಡಿ ಜಿಲ್ಲೆ ಬೆಳಗಾವಿಗೆ ಹೊಂದಿಕೊಂಡಿರುವ ಶಿದ್ನಳ್ಳಿ ಗ್ರಾಮದಲ್ಲಿ ತಲೆಬುರುಡೆ ಪತ್ತೆಯಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. 

ಕರ್ನಾಟಕ ಮತ್ತು  ಮಹಾರಾಷ್ಟ್ರದಲ್ಲಿ ಹರಿಯುವ ದೂದಗಂಗಾ ನದಿಯ ಪಕ್ಕದಲ್ಲೇ ತಲೆಬುರುಡೆ ಪತ್ತೆಯಾಗಿದೆ. ಜಾನುವಾರುಗಳ ಮೈ ತೊಳೆಯಲು ಹೋದ ರೈತರ ಕಣ್ಣಿಗೆ ಈ ತಲೆಬುರುಡೆಗಳು ಕಾಣಿಸಿತು. ಇದನ್ನು ಕಂಡು ಬೆಚ್ಚಿಬಿದ್ದ ಸ್ಥಳೀಯರು, ಕಾಗಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.

ಕೂಡಲೇ ಸ್ಥಳಕ್ಕೆ ಮಹಾರಾಷ್ಟ್ರದ ಕಾಗಲ್ ಠಾಣೆಯಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ನದಿ ಪಾತ್ರದಲ್ಲಿದ್ದ ಮಾನವ ತಲೆಬುರುಡೆಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಕರ್ನಾಟಕ-ಮಹಾರಾಷ್ಟ್ರ ಪೊಲೀಸರಿಗೆ ತಲೆ ಬುರಡೆಗಳು ತಲೆನೋವಾಗಿ ಪರಿಣಮಿಸಿದೆ. ಕರ್ನಾಟಕ ಪೊಲೀಸರನ್ನು ಸಂಪರ್ಕಿಸಿ ಮಹಾರಾಷ್ಟ್ರ ಪೊಲೀಸರು ಮಾಹಿತಿ ಪಡೆದಿದ್ದಾರೆ. ನದಿ ಪಕ್ಕ ಸಿಕ್ಕ ತಲೆಬುರುಡೆಗಳನ್ನು ಕಾಗಲ್ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮಳೆಯಿಂದಾಗಿ ದೂಧಗಂಗಾ ನದಿ ಪಾತ್ರದಲ್ಲಿ ನೀರು ಕಡಿಮೆಯಾಗಿದೆ. ಇದರಿಂದಾಗಿ ಈ ತಲೆಬುರುಡೆಗಳು ಪತ್ತೆಯಾಗಿವೆ. ಒಂದೇ ಸ್ಥಳದಲ್ಲಿ 4 ಮಾನವ ತಲೆಬುರುಡೆಗಳು ಪತ್ತೆಯಾಗಿರುವುದರಿಂದ ಅಚ್ಚರಿ ವ್ಯಕ್ತವಾಗುತ್ತಿದೆ. ದೂಧಗಂಗಾ ನದಿಯಲ್ಲಿ ತಲೆಬುರುಡೆಗಳನ್ನು ನೋಡಲು ನಾಗರಿಕರು ಜಮಾಯಿಸಿದ್ದರು.

ಕೆಲ ದಿನಗಳ ಹಿಂದೆಯಷ್ಟೇ ವಲಸಿಗ ಭೋಂಡು ಬಾಬಾ ಸಿದ್ದನೇರ್ಲಿ, ಬಾಮನಿ ಗ್ರಾಮಗಳಲ್ಲಿ ಪತ್ತೆಯಾಗಿದ್ದ. ಇದೀಗ ಒಂದೇ ಸ್ಥಳದಲ್ಲಿ ನಾಲ್ಕು ತಲೆಬುರುಡೆಗಳು ಪತ್ತೆಯಾಗಿರುವುದರಿಂದ ಇದು ಅಘೋರಿ ಕೃತ್ಯವಿರಬಹುದೇ ಎಂಬ ಚರ್ಚೆ ಹುಟ್ಟಹಾಕಿದೆ. ನದಿಯಲ್ಲಿ ಮಾನವ ತಲೆಬುರುಡೆಗಳು ಪತ್ತೆಯಾಗಿವೆ. ಆದರೆ, ಮೃತದೇಹವನ್ನು ಎಲ್ಲಿ ಬಿಸಾಡಲಾಗಿದೆ ಎಂಬ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. 

ಕಳೆದ ತಿಂಗಳು ಸಾಂಗ್ಲಿ ಜಿಲ್ಲೆಯ ಯುವಕನೊಬ್ಬನನ್ನು ಆತನ ತಂದೆ ಕೊಂದು ಆತನ ಶವವನ್ನು ಪಕ್ಕದ ಬಾಮ್ನಿ ಗ್ರಾಮದ ಗಡಿಯಲ್ಲಿ ಎಸೆದಿದ್ದರು. ಇದರಿಂದ ಸಿದ್ದನೇರಳ್ಳಿ, ಬಾಮನಿ ಗ್ರಾಮಗಳ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.