ಬೆಳಗಾವಿಯಲ್ಲಿ ಅಡುಗೆ ಸಿಲಿಂಡರ್ ಸ್ಟೋಟ, ಸರ್ಕಾರಿ ಚಾಲಕನ ಕುಟುಂಬ ಗಂಭೀರ

ಬೆಳಗಾವಿ (ಜು.1):  ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಫೋಟಗೊಂಡ ಘಟನೆ ಬೆಳಗಾವಿಯ ಸುಭಾಷ್ ಗಲ್ಲಿಯಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ  ಮನೆಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯವಾಗಿದೆ. NWKRTC ನೌಕರ ಮಂಜುನಾಥ ನರಸಪ್ಪ ಅಥಣಿ (42), ಪತ್ನಿ ಲಕ್ಷ್ಮೀ (36) ಗಂಭೀರ ಗಾಯವಾಗಿದ್ದು, ಮಕ್ಕಳಾದ ವೈಷ್ಣವಿ(13), ಸಾಯಿಪ್ರಸಾದ್‌(10)ಗೆ ಸಣ್ಣಪುಟ್ಟ ಗಾಯವಾಗಿದೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂದಿನಂತೆ ಬೆಳಗ್ಗೆ ಎದ್ದು ಚಹಾ ಮಾಡಲು ಲೈಟರ್ ಆನ್ ಮಾಡಿದಾಗ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಮಾಳ ಮಾರುತಿ  ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಘಟನೆ ನಡೆದ ಬೆಳಗಾವಿಯ ಸುಭಾಷ್ ಗಲ್ಲಿಯಲ್ಲಿನ ಮನೆಗೆ ಎಚ್‌ಪಿ ಗ್ಯಾಸ್‌ನ ಏಜೆನ್ಸಿ ಮ್ಯಾನೇಜರ್ ಕೂಡ  ಭೇಟಿ ನೀಡಿ ಮನೆ ಮಾಲೀಕರು, ಪಕ್ಕದ ಮನೆ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಎಚ್‌ಪಿ ಏಜೆನ್ಸಿ ಮ್ಯಾನೇಜರ್ ಶಿವರಾಜ್ ಮಾಹಿತಿ ನೀಡಿ ರೆಗ್ಯುಲೇಟರ್ ಕೂಡ ಉತ್ತಮವಾಗಿದೆ, ಲೀಕೆಜ್ ಕೂಡ ಆಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಸಿಲಿಂಡರ್ ಸ್ಪೋಟ ಆಗಿರಬಹುದು ಎಂಬುದು ನಮ್ಮ ಊಹೆ. ಈ ಬಗ್ಗೆ ಪರಿಶೀಲನೆ ನಡೆಸಿ, ಸತ್ಯಾಸತ್ಯತೆ ತಿಳಿದುಕೊಳ್ಳುತ್ತೇವೆ. ಸ್ಪೋಟದ ರಭಸಕ್ಕೆ ಮನೆಯ ಕಿಟಕಿ ಗಾಜು ಪುಡಿಪುಡಿಯಾಗಿವೆ. ಪಕ್ಕದ ಮನೆಯ ಕಿಟಕಿಯ ಗಾಜು ಕೂಡ ಒಡೆದಿವೆ ಎಂದು  ಶಿವರಾಜ್ ಹೇಳಿದ್ದಾರೆ.

ಸುಭಾಷ್​ ಗಲ್ಲಿಯ ಕಟ್ಟಡದ ಮೊದಲ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ಮಂಜುನಾಥ ಕುಟುಂಬ ವಾಸವಿದ್ದು, ಬೆಳಗಾವಿಯ ಕೆಎಸ್ ಆರ್.ಟಿಸಿ ಮೊದಲನೇ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಘಟನೆಯ ಭೀಕರತೆಗೆ ಮನೆಯಲ್ಲಿದ್ದ ಬಹುತೇಕ ವಸ್ತುಗಳು ಬೆಂಕಿಗಾಹುತಿಗಾಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದೆ.

ಪತಿ ಪತ್ನಿ ಇಬ್ಬರಿಗೂ ಸುಮಾರು ಶೇ. 75ರಷ್ಟು ಸುಟ್ಟ ಗಾಯಗಳಾಗಿವೆ. ಇಬ್ಬರು ಮಕ್ಕಳಿಗೆ ಸುಮಾರು ಶೇಕಡ 40ರಷ್ಟು ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಿನ್ನೆ ಗ್ಯಾಸ್ ತಂದುಕೊಟ್ಟು ಹೋಗಿದ್ದು, ಚೆಕ್ ಮಾಡದೆ ಲೀಕ್ ಸಿಲಿಂಡರ್ ನೀಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.