ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥ: ವೈದ್ಯರನ್ನು ಕರೆಸಿ ಶಾಲೆಯಲ್ಲೇ ಮಕ್ಕಳಿಗೆ ಚಿಕಿತ್ಸೆ

ರಾಯಚೂರು: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವಂತಹ ಘಟನೆ  ತಾಲೂಕಿನ ಅಪ್ಪನದೊಡ್ಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಸದ್ಯ ವೈದ್ಯರನ್ನು ಕರೆಸಿ ಶಾಲೆಯಲ್ಲೇ ಅಸ್ವಸ್ಥ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇಂದು ಮಧ್ಯಾಹ್ನ ಬಿಸಿಯೂಟಕ್ಕೆ ಸಿಬ್ಬಂದಿಗಳು ಉಪ್ಪಿಟ್ಟು ಮಾಡಿದ್ದರು. ಅಡುಗೆ ಪಾತ್ರೆಯ ತಳಹದಿಯಲ್ಲಿ ಹಲ್ಲಿ ಪತ್ತೆಯಾಗಿದೆ. ಘಟನೆಗೆ ಸದ್ಯ ಇಬ್ಬರು ಅಡುಗೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಕೇಳಿಬಂದಿದೆ.

ಸರ್ಕಾರಿ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶಾಲೆ ಆವರಣದಲ್ಲಿ ಮಕ್ಕಳ ಪೋಷಕರು ಜಮಾಯಿಸಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.