ಜನ ಸಾಯುತ್ತಿದ್ದರು, ಸಹಾಯಕ್ಕಾಗಿ ಅಂಗಲಾಚಿದರೂ ನಿಲ್ಲದೇ ಹೋದವು ಕಾರುಗಳು; ಮಹಾ ಬಸ್ ದುರಂತದಲ್ಲಿ ಬದುಕುಳಿದವರ ಅಳಲು

ಪುಣೆ: ಬಸ್ ಧಗಧಗನೆ ಹೊತ್ತಿ ಉರಿಯುತ್ತಿತ್ತು. ಅದರೊಳಗಿನ ಜನ ಹೊರಗೆ ಜಿಗಿದು ತಪ್ಪಿಸಿಕೊಳ್ಳಲೂ ಆಗದೆ, ಅತ್ತ ಬೆಂಕಿಯ ಬೇಗೆ ತಾಳಲಾರದೆ ಸಹಾಯಕ್ಕಾಗಿ ದೊಡ್ಡ ದನಿಯಲ್ಲಿ ಕೂಗಿ ಕರೆಯುತ್ತಿದ್ದರು. ಕಿಟಿಕಿಯ ಗಾಜು ಒಡೆದು ಹೊರ ಜಿಗಿದ ಕೆಲವರು ಸಹ ಪ್ರಯಾಣಿಕರ ರಕ್ಷಣೆಗೆ ನೆರವಾಗಿ ಎಂದು ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರುಗಳಿಗೆ ಕೈ ಅಡ್ಡ ಹಿಡಿದು ಮೊರೆಯಿಡುತ್ತಿದ್ದರು. ಆದರೂ ಕಾರುಗಳಲ್ಲಿ ಸಾಗುತ್ತಿದ್ದವರ ಮನ ಮಿಡಿಯಲಿಲ್ಲ, ಹಾಗೆಯೇ ಮುಂದೆ ಹೋದರು ಎಂದು ಮಹಾರಾಷ್ಟ್ರದ  ಬುಲ್ಧಾನದ ಸಿಂಧಖೇಡ್ರಾಜ ಬಳಿ ಎಕ್ಸ್​​ಪ್ರೆಸ್ ವೇಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಬದುಕುಳಿದವರು ಮತ್ತು ಪ್ರತ್ಯಕ್ಷದರ್ಶಿಗಳು ಅಳಲು ತೋಡಿಕೊಂಡಿದ್ದಾರೆ. ಘಟನೆಯಲ್ಲಿ ಸುಮಾರು 25 ಮಂದಿ ಸಜೀವ ದಹನವಾಗಿದ್ದಾರೆ.

ಇದ್ದಕ್ಕಿಂದಂತೆ ಬಸ್​ಗೆ ಬೆಂಕಿ ಹೊತ್ತಿ ಉರಿಯಲಾರಂಭವಾಯಿತು. ಹಿಂಭಾಗದ ಕಿಟಕಿಯನ್ನು ಒಡೆದು ಹೊರಗೆ ಬರುವಲ್ಲಿ ನಾವು ಯಶಸ್ವಿಯಾದೆವು ಎಂದು ದುರಂತದಲ್ಲಿ ಬದುಕುಳಿದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ನಾಗ್ಪುರದಿಂದ ಪುಣೆಗೆ ತೆರಳುತ್ತಿದ್ದ ಖಾಸಗಿ ಪ್ರಯಾಣಿಕ ಬಸ್ ಮಧ್ಯರಾತ್ರಿ 1:30 ರ ಸುಮಾರಿಗೆ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಬಸ್ಸಿನಲ್ಲಿ ಸುಮಾರು 33 ಪ್ರಯಾಣಿಕರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌ನ ಟೈರ್ ಸ್ಫೋಟವಾಯಿತು. ನಂತರ ಬಸ್ ಕಂಬಕ್ಕೆ ಡಿಕ್ಕಿ ಹೊಡೆದು ತಕ್ಷಣವೇ ಬೆಂಕಿ ಹೊತ್ತಿಕೊಂಡಿತು. ಸ್ವಲ್ಪ ಸಮಯದಲ್ಲೇ ಬೆಂಕಿ ವ್ಯಾಪಿಸಿತು ಎಂದು ಅಪಘಾತದಿಂದ ಪಾರಾದ ವ್ಯಕ್ತಿ ತಿಳಿಸಿದ್ದಾರೆ.

ನನ್ನ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರು ಮತ್ತು ನಾನು ಹಿಂಬದಿಯ ಕಿಟಕಿಯನ್ನು ಒಡೆದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆವು. ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ತ್ವರಿತವಾಗಿ ಸ್ಥಳಕ್ಕೆ ತಲುಪಿದವು. ನಾಲ್ಕೈದು ಮಂದಿ ಪ್ರಯಾಣಿಕರು ಬಸ್‌ನ ಒಂದು ಕಿಟಕಿಯನ್ನು ಒಡೆದು ಹೊರಬಂದರು. ಆದರೆ ಎಲ್ಲರೂ ಇದನ್ನು ಮಾಡಲು ಸಾಧ್ಯವಾಗಲಿಲ್ಲ. ನಾನೂ ಸೇರಿದಂತೆ ಬಸ್‌ನಿಂದ ಹೊರ ಜಿಗಿದವರು ಜನರು ಸುಟ್ಟುಹೋಗುತ್ತಿರುವುದನ್ನು ನೋಡಲಾಗದೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನಗಳ ಸಹಾಯವನ್ನು ಕೋರಿದೆವು. ಆದರೆ ಯಾರೂ ನಿಲ್ಲಿಸಲಿಲ್ಲ ಎಂದು ಅವರು ಬೇಸರ ತೋಡಿಕೊಂಡರು.

ಈ ಮಾರ್ಗದಲ್ಲಿ ಅನೇಕ ಅಪಘಾತಗಳು ನಡೆಯುತ್ತವೆ. ನಮ್ಮನ್ನು ಸಹಾಯಕ್ಕಾಗಿ ಕರೆದಾಗ ನಾವು ಅಲ್ಲಿಗೆ ಹೋದೆವು. ಅಷ್ಟರಲ್ಲಿ ಭೀಕರ ಪರಿಸ್ಥಿತಿ ನೋಡಬೇಕಾಯಿತು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

ಒಳಗಿದ್ದ ಜನರು ಕಿಟಕಿಗಳನ್ನು ಒಡೆದು ಹೊರಗೆ ಬರಲು ಪ್ರಯತ್ನಿಸುತ್ತಿದ್ದರು. ಜನರು ಜೀವಂತವಾಗಿ ಸುಟ್ಟುಹೋಗುವುದನ್ನು ನೋಡಬೇಕಾದ ಅಸಹಾಯಕತೆ ನಮ್ಮದಾಯಿತು. ಬೆಂಕಿಯು ತುಂಬಾ ತೀವ್ರವಾಗಿದ್ದರಿಂದ ನಾವು ಅಸಹಾಯಕರಾಗಬೇಕಾಯಿತು ಎಂದು ಸಹಾಯಕ್ಕೆಂದು ಧಾವಿಸಿದ್ದ ವ್ಯಕ್ತಿಯೊಬ್ಬರು ಕಣ್ಣೀರು ಹಾಕಿದ್ದಾರೆ.

ಹೆದ್ದಾರಿ ಮೂಲಕ ಹಾದುಹೋಗುವ ವಾಹನಗಳು ಸಹಾಯಕ್ಕಾಗಿ ನಿಲ್ಲಿಸಿದ್ದರೆ, ಹೆಚ್ಚಿನ ಜೀವಗಳನ್ನು ಉಳಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.

ಬಸ್ ದುರಂತದಲ್ಲಿ ಬದುಕುಳಿದ ಎಂಟು ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.