ಮದ್ವೆ ಹಿಂದಿನ ದಿನ ಅಪಘಾತ; ಆಂಬುಲೆನ್ಸ್‌ನಲ್ಲಿ ಬಂದಿಳಿದು, ಸ್ಟ್ರೆಚರ್‌ನಲ್ಲೇ ಕುಳಿತೇ ಸಪ್ತಪದಿ ತುಳಿದ ವರ!

ಮದುವೆಯೆಂದರೆ ಹಾಗೇ ಅದೆಷ್ಟೇ ಸುಸೂತ್ರವಾಗಿ ನಡೆಯಬೇಕು ಅಂದುಕೊಂಡರೂ ಕೆಲವೊಂದು ಅಡ್ಡಿ-ಆತಂಕಗಳು ಎದುರಾಗುತ್ತವೆ. ಹೀಗಾಗಿಯೇ ಮನೆ ಮಂದಿ ಮದುವೆಯ ಎಲ್ಲಾ ತಯಾರಿಯನ್ನೂ ಬಹಳ ಜಾಗರೂಕತೆಯಿಂದ ಮಾಡುತ್ತಾರೆ. ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಾರೆ. ಅದಲ್ಲದೆ ಮದುವೆಗೆ ಇನ್ನೇನು ಕೆಲವೇ ವಾರವಿದೆ ಅನ್ನುವಾಗ ಭಾವೀ ವಧು-ವರರನ್ನು ಮನೆಯಿಂದ ಹೊರಗೆ ಸಹ ಬಿಡುವುದಿಲ್ಲ. ಇದರಿಂದ ಏನಾದರೂ ಅನಿಷ್ಟ ನಡೆಯುತ್ತದೆ ಎಂಬುದು ಹಲವರ ನಂಬಿಕೆ. ಅದು ಕೆಲವೊಮ್ಮೆ ನಿಜ ಆಗಿದ್ದು ಸಹ ಇದೆ. ಜಾರ್ಖಂಡ್‌ನ ಮದುವೆ ಮನೆಯೊಂದರಲ್ಲಿ ಆಗಿದ್ದೂ ಇದೆ.

ಮದ್ವೆ ದಿನ ವರ ಅದ್ಧೂರಿ ಮೆರವಣಿಗೆಯಲ್ಲಿ ಬ್ಯಾಂಡ್‌, ಸಾಂಗ್, ಮಸ್ತಿ ಜೊತೆ ಕಾರಲ್ಲಿ ಬರೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ವರ ಮಾತ್ರ ಬಂದಿಳಿದಿದ್ದು ನೋಡಿ ಎಲ್ಲರೂ ಶಾಕ್‌ ಆದ್ರು. ಯಾಕಂದ್ರೆ ಇಲ್ಲಿ ವರ ಬಂದಿಳಿದಿದ್ದು ಕಾರು, ಜೀಪ್‌ನಲ್ಲಿ ಅಲ್ಲ ಬದಲಿಗೆ ಆಂಬುಲೆನ್ಸ್‌ನಲ್ಲಿ. ಹೌದು, ಜಾರ್ಖಂಡ್‌ನಲ್ಲಿ ಮದ್ವೆಯ ಹಿಂದಿನ ದಿನ ವರ ಅಪಘಾತ ಕ್ಕೊಳಗಾದರಿಂದ ಕಾರಿನಲ್ಲಿ ಬಂದಿಳಿಯುವ ಮೊದಲು  ಆಂಬ್ಯುಲೆನ್ಸ್‌ನಲ್ಲಿ ಬಂದಿಳಿಯಬೇಕಾಯಿತು. 

ಸ್ಟ್ರೆಚ್ಚರ್‌ನಲ್ಲಿ ಕುಳಿತುಕೊಂಡೇ ಸಪ್ತಪದಿ ತುಳಿದ ವರ

ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ನಡೆದ ಮದುವೆಯೊಂದರಲ್ಲಿ ವರ ಆಂಬ್ಯುಲೆನ್ಸ್‌ನಲ್ಲಿ ಜನರೊಂದಿಗೆ ಆಗಮಿಸಿ ಸ್ಟ್ರೆಚರ್‌ನಲ್ಲಿ ಕುಳಿತುಕೊಂಡೇ ಮದುವೆಯ ವಿಧಿ ವಿಧಾನಗಳಲ್ಲಿ ನಡೆಸಿದ ವಿಚಾರ ಎಲ್ಲೆಡೆ ಚರ್ಚೆಯಾಗಿದೆ. ಅಪಘಾತಕ್ಕೀಡಾಗಿ ಕಾಲು ಮುರಿದಿದ್ದರೂ ವರ, ನಿಗದಿತ ಮುಹೂರ್ತದಂದೇ ಮದುವೆಯಾಗಲು ನಿರ್ಧರಿಸಿದನು. ಹೀಗಾಗಿ ಆಂಬುಲೆನ್ಸ್‌ನಲ್ಲಿ ವರನನ್ನು ಮಂಟಪಕ್ಕೆ ಕರೆತರಲಾಯಿತು. ಮತ್ತು ವರ ಸ್ಟ್ರೆಚ್ಚರ್‌ನಲ್ಲಿ ಕುಳಿತುಕೊಂಡೇ ಮದುವೆಯ ವಿಧಿವಿಧಾನಗಳನ್ನು ನೆರವೇರಿಸಿದನು.

ಚಂದ್ರೇಶ್ ಮಿಶ್ರಾರ ಮದುವೆ ಜಾರ್ಖಂಡ್‌ನ ಪಲಾಮು ಜಿಲ್ಲೆಯ ಮೇದಿನಿನಗರದ ಹೋಟೆಲ್‌ನಲ್ಲಿ ಜೂನ್ 25 ರಂದು ನಿಗದಿಪಡಿಸಲಾಗಿತ್ತು. ಆದರೆ ಇದಕ್ಕೂ ಮೊದಲು ಚಂದ್ರೇಶ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ಕಾಲು ಮುರಿತವಾಗಿದ್ದ ಕಾರಣ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯಿತು. ಚಂದ್ರೇಶ್‌ ಸ್ಥಿತಿಯಿಂದ ಆತಂಕಗೊಂಡ ಕುಟುಂಬಸ್ಥರು ಮದುವೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಆದರೆ, ಮಿಶ್ರಾ ಎಲ್ಲಾ ನೋವಿನ ಮಧ್ಯೆಯೂ ನಿಗದಿತ ದಿನಾಂಕದಂದೇ ಮದುವೆಯಾಗುವುದಾಗಿ ಪಟ್ಟು ಹಿಡಿದರು. ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಮದುವೆಯನ್ನು ಮುಂದೂಡುವಂತೆ ಅವನ ಮನೆಯವರು ಒತ್ತಾಯಿಸಿದರೂ ಕೇಳಲ್ಲಿಲ್ಲ.

ವಧು ಪ್ರೇರಣಾಗಳನ್ನು ಕಾಯಿಸಲು ಇಷ್ಟಪಡುವುದಿಲ್ಲ ಎಂದು ಚಂದ್ರೇಶ್ ಹೇಳಿದರು. ಸ್ಟ್ರಚರ್‌ನಲ್ಲಿ ಕುಳಿತುಕೊಂಡೇ ಸಪ್ತಪದಿ ತುಳಿದರು. ಮದುವೆಗೆ ಆಗಮಿಸಿದ ಬಂಧು-ಬಳಗದವರು ಮನದುಂಬಿ ಹಾರೈಸಿದರು. ವರನ ದೃಢಸಂಕಲ್ಪಕ್ಕೆ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಭಾವುಕರಾದರು.

ಈ ಹಿಂದೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಮದುವೆಯೂ ಇದೇ ರೀತಿ ಸುದ್ದಿಯಾಗಿತ್ತು. ಜನರು ಸಾಮಾನ್ಯವಾಗಿ ಮದುವೆ ದಿಬ್ಬಣದ ಮೆರವಣಿಗೆಗಾಗಿ ಕಾರು, ಬಸ್ಸು ಅಥವಾ ಕುದುರೆಯನ್ನು ಆರಿಸಿಕೊಳ್ಳುತ್ತಾರೆ. ಆದರೆ ಈ ಮದುವೆಯಲ್ಲಿ ವರ ಮದುವೆಯಾಗಲು ಜೆಸಿಬಿಯಲ್ಲಿ ಮದುವೆಯ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾನೆ. ವರ ರಾಜಾ ಕೃಷ್ಣ ಮಹತೋ ತನ್ನ ವಧುವನ್ನು ಮನೆಗೆ ಕರೆದುಕೊಂಡು ಹೋಗಲು ಜೆಸಿಬಿ ಬಳಸಿದ್ದು ಎಲ್ಲರ ಗಮನ ಸೆಳೆಯಿತು.

ಜೆಸಿಬಿಯನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿದ್ದು, ಹಾಯಾಗಿ ಕುಳಿತುಕೊಳ್ಳಲು ಹಾಸಿಗೆ, ಕುಶನ್‌ಗಳನ್ನು ಹಾಕಲಾಗಿತ್ತು. ಅದ್ಧೂರಿಯಾಗಿ ಮೆರವಣಿಗೆ ಹೊರಟಾಗ ನೋಡುಗರೆಲ್ಲ ಬೆರಗಾಗುವಂತೆ ಮಾಡಿತು. ವೃತ್ತಿಯಲ್ಲಿ ಹೂವಿನ ವ್ಯಾಪಾರಿಯಾಗಿರುವ ಕೃಷ್ಣ ಮಹತೋಗೆ ತಮ್ಮ ಮದುವೆಗೆ ವಿಶೇಷವಾಗಿ ಏನಾದರೂ ಮಾಡಬೇಕೆಂಬ ಆಸೆಯಿತ್ತು. ಹೀಗಾಗಿ ಜೆಸಿಬಿಯಲ್ಲಿ ಮೆರವಣಿಗೆ ಬಂದಿದ್ದಾಗಿ ತಿಳಿಸಿದರು.