ಕಷ್ಟಪಟ್ಟು ಪತ್ನಿಯನ್ನು ಓದಿಸಿದ ಗಂಡ, ಸರ್ಕಾರಿ ಕೆಲ್ಸ ಸಿಗ್ತಿದ್ದಂತೆ ಗಂಡನನ್ನೇ ಜೈಲಿಗೆ ಕಳಿಸಿದ್ಲು ಹೆಂಡ್ತಿ!

ಲಖನೌ​: ಕಷ್ಟಪಟ್ಟು ಓದಿಸಿದ ಗಂಡನಿಗೇ ಹೆಂಡ್ತಿ ಮೋಸ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಅಲೋಕ್ ಮೌರ್ಯ ಎಂಬಾತ ತನ್ನ ಎಸ್‌ಡಿಎಂ (ಉಪವಿಭಾಗೀಯ ಮ್ಯಾಜಿಸ್ಟ್ರೇಟ್) ಪತ್ನಿ ಜ್ಯೋತಿ ಮೌರ್ಯ ವಿರುದ್ಧ ಈ ಆರೋಪ ಮಾಡಿದ್ದಾರೆ. ಅಲೋಕ್ ಹೇಳಿಕೊಂಡಂತೆ, ಮದುವೆ ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಆದರೆ, ಅಲೋಕ್‌ ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ ಕೊಡಿಸಿದರು. ಪ್ರಯಾಗ್​ರಾಜ್​ನಲ್ಲಿರುವ ಒಳ್ಳೆಯ ಕೋಚಿಂಗ್​ ಕೇಂದ್ರಕ್ಕೆ ದಾಖಲಿಸಿದರು. ಅವರ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ಪತ್ನಿ ಜ್ಯೋತಿ 2016ರಲ್ಲಿ ಸಬ್​ ಡಿವಿಷನಲ್​ ಮ್ಯಾಜಿಸ್ಟ್ರೇಟ್​ (ಎಸ್​ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡರು.

ಸರ್ಕಾರಿ ಕೆಲಸ ಸಿಕ್ಕಿದ್ದೇ ತಡ ಜ್ಯೋತಿ ಸಂಪೂರ್ಣವಾಗಿ ಬದಲಾದರು. ಯಶಸ್ಸು ಆಕೆಯ ತಲೆಗೆ ಹತ್ತಿತ್ತು. ಮತ್ತೊಬ್ಬ ಅಧಿಕಾರಿಯೊಂದಿಗೆ ಸೇರಿ ನನಗೆ ಮೋಸ ಮಾಡಿದಳು ಎಂದು ಅಲೋಕ್ ಆರೋಪಿಸಿದ್ದಾರೆ. ಜ್ಯೋತಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆಕೆಯ ಸಂಬಂಧದ ಬಗ್ಗೆ ತಿಳಿದ ನಂತರವೂ, ಅಲೋಕ್ ಅವರ ಮದುವೆಯನ್ನು ಉಳಿಸಿಕೊಳ್ಳಲು ತೀವ್ರವಾಗಿ ಪ್ರಯತ್ನಿಸಿದರು. ಆದರೂ ಆಕೆ ಅಲೋಕ್‌ಗೆ ಎಲ್ಲಾ ರೀತಿಯಲ್ಲಿ ತೊಂದರೆ ನೀಡಿದರು ಎಂದು ತಿಳಿದುಬಂದಿದೆ.

ಜ್ಯೋತಿ ತನ್ನ ವಿರುದ್ಧ ಸುಳ್ಳು ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಅಲೋಕ್ ಆರೋಪಿಸಿದ್ದಾರೆ, ಇದು ತನ್ನ ಬಂಧನಕ್ಕೆ ಕಾರಣವಾಯಿತು. ಅಲೋಕ್ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ ಆದರೆ ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮಗಳ ಮುಂದೆ ಅಲೋಕ್​ ಕಣ್ಣೀರಿಟ್ಟಿದ್ದಾರೆ.

ಜ್ಯೋತಿ, ಗಂಡನ ವಿರುದ್ಧವೇ ಸುಳ್ಳು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿದ್ದು, ಇದೀಗ ಅಲೋಕ್​ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದರೆ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ. ಅಲೋಕ್ ತನ್ನ ಹೆಂಡತಿಯ ಶಿಕ್ಷಣಕ್ಕಾಗಿ ವರ್ಷಗಳ ಕಾಲ ದುಡಿದು ಹಣ ವ್ಯಯಿಸಿ, ಅಂತಿಮವಾಗಿ ಪತ್ನಿಯನ್ನು ಎಸ್‌ಡಿಎಂ ಮಾಡಿದರೂ ಇದೀಗ ತಾನು ನಿರುದ್ಯೋಗಿಯಾಗಿ ಮತ್ತು ಏಕಾಂಗಿಯಾಗಿ ಸಂಪೂರ್ಣ ಅಸಹಾಯಕನಾಗಿದ್ದಾನೆ. ಅಲ್ಲದೆ, ಇದೇ ವೇಳೆ ಪತ್ನಿಗೆ ಸೌಹಾರ್ದಯುತವಾಗಿ ವಿಚ್ಛೇದನ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅಲೋಕ್ ಆರೋಪಿಸಿದ್ದಾರೆ.