ಬೆಂಗಳೂರು: ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣಕ್ಕೆ ತಳುಕು ಹಾಕಿದ ಹುಡುಗಿ ವಿಚಾರ; ಪೊಲೀಸರ ಮುಂದೆ ಕಣ್ಣೀರಾದ ವಿದ್ಯಾರ್ಥಿಗಳು

ಬೆಂಗಳೂರು: ನಗರದ ನಾಗರಾಭಾವಿ ಖಾಸಗಿ ಕಾಲೇಜು ಮುಂದೆ ವಿದ್ಯಾರ್ಥಿ ಮೇಲೆ ಲಾಂಗ್​ನಿಂದ ಹಲ್ಲೆ  ನಡೆಸಿದ ಪ್ರಕರಣದ ಹಿಂದಿನ ಅಸಲಿ ಕಾರಣ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ. ಹಲ್ಲೆಗೊಳಗಾದ ದರ್ಶನ್ ಹಾಗೂ ಪ್ರಮುಖ ಆರೋಪಿ ಸಾಹಸ್ ಗೌಡ ಅಲಿಯಾಸ್ ಸತ್ಯ ಎಂಬವರ ನಡುವೆ ವೈಷಮ್ಯ ಇತ್ತು. ಈ ವಿಚಾರವಾಗಿಯೇ ಗಲಾಟೆಗಳು ನಡೆದಿದ್ದವು ಎಂದು ತಿಳಿದುಬಂದಿದೆ. ಅಷ್ಟಕ್ಕೂ ಹಲ್ಲೆಗೆ ಕಾರಣವೇನು? ವಿದ್ಯಾರ್ಥಿಗಳು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದು ಯಾಕೆ? ಇಲ್ಲಿದೆ ನೋಡಿ ಮಾಹಿತಿ.

ಸ್ನೇಹಿತರನ್ನೊಳಗೊಂಡ ದರ್ಶನ್ ಗುಂಪು ಮತ್ತು ಸಾಹಸ್ ಗುಂಪು ಓರ್ವ ಯುವತಿಯ ವಿಚಾರದಲ್ಲಿ ಕೆಲ ತಿಂಗಳ ಹಿಂದೆ ಜಗಳ ಮಾಡಿಕೊಂಡಿದ್ದವು. ಈ ವೇಳೆ ಸಾಹಸ್ ಗೌಡ ಹಲ್ಲೆಗೆ ಮುಂದಾದಾಗ ದರ್ಶನ್ ಸ್ಥಳದಿಂದ ಓಡಿ ಹೋಗಿದ್ದ. ನಂತರ ಸಾಹಸ್ ಮೇಲೆ ದ್ವೇಷ ಬೆಳೆಸಿಕೊಂಡ ದರ್ಶನ್, ಸಾಹಸ್​ನನ್ನು ಹೊಡೆಯುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದನು.

ಅಲ್ಲದೆ ಗಲಾಟೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಹಸ್ ಗೌಡ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ. ಹೀಗೆ ಬಿಟ್ಟರೆ ದರ್ಶನ್ ನನ್ನನ್ನೇ ಹೊಡಿತಾನೆ ಅಂತಾ ಯೋಚಿಸಿದ ಆರೋಪಿ, ಬೇರೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಹಾಗೂ ಹೊರಗಿನ ಮೂವರು ಹುಡುಗರನ್ನ ಕರೆತಂದು ಕಾಲೇಜು ಮುಂಭಾಗದಲ್ಲೇ ದರ್ಶನ್ ಮೇಲೆ ಲಾಂಗ್​ನಿಂದ ಹಲ್ಲೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ.

ಹಲ್ಲೆ ಪ್ರಕರಣ ಸಂಬಂಧ ವಿಚಾರಣೆ ವೇಳೆ ವಿದ್ಯಾರ್ಥಿಗಳು ಪೊಲೀಸರ ಮುಂದೆ ಕಣ್ಣೀರಿಟ್ಟ ಘಟನೆ ನಡೆದಿದೆ. ಸುಮ್ಮನೆ ಹೆದರಿಸಲು ಅಂತಾ ಕರೆದುಕೊಂಡು ಬಂದಿದ್ದ. ಆದರೆ ಸಾಹಸ್ ಲಾಂಗ್ ತಂದಿರುವುದು ಗೊತ್ತಾಗಿಲ್ಲ. ನಮ್ಮ ಜೀವನವೇ ಹಾಳಾಯಿತು ಎಂದು ವಿದ್ಯಾರ್ಥಿಗಳು ತನಿಖಾಧಿಕಾರಿಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.