ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋಗಿದ್ದ ವಿದ್ಯಾರ್ಥಿನಿ ಸಾವು, ನಾನಾ ಕಾರಣ ಹೇಳುತ್ತಿರುವ ವೈದ್ಯರು

ಉಡುಪಿ: ವೈದ್ಯರ  ನಿರ್ಲಕ್ಷದಿಂದ ಮಗಳು ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಕೆಮ್ಮುಂಡೇಲು ನಿವಾಸಿ ನಿಕಿತಾ(20) ಮೃತ ವಿದ್ಯಾರ್ಥಿನಿ. ಜನಾರ್ದನ-ಶೋಭಾ ದಂಪತಿಯ ಏಕೈಕ ಮಗಳು. ಹೊಟ್ಟೆ ನೋವು ಎಂಬ ಕಾರಣಕ್ಕೆ ಕಳೆದ ಬುಧವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಕ್ಯಾನಿಂಗ್ ಎಂಡೋಸ್ಕೋಪಿ ಸಿಟಿ ಸ್ಕ್ಯಾನ್ ಮಾಡಲಾಗಿತ್ತು. ಬಳಿಕ ಸರಿಯಾದ ಮಾಹಿತಿ ನೀಡದೆ ಆಪರೇಷನ್​ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಅಪೆಂಡಿಕ್ಸ್ ಆಗಿದೆ ಎಂದು ಆಪರೇಷನ್ ಮಾಡಿದ್ದು, ಶಸ್ತ್ರಚಿಕಿತ್ಸೆ ನಡೆದ ಬಳಿಕ ಲಂಗ್ಸ್​ನಲ್ಲಿ ನೀರು ತುಂಬಿದ ಪರಿಣಾಮ ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು ಕಂಡು ಪೋಷಕರು ಆತಂಕಗೊಂಡಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.

ಯಾವುದೇ ಗಂಭೀರ ಸಮಸ್ಯೆ ಇಲ್ಲ ನಾವೇ ಚಿಕಿತ್ಸೆ ನೀಡುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. ಇದ್ದಕ್ಕಿದ್ದಂತೆ ಶ್ವಾಸದಲ್ಲಿ ಏರುಪೇರು ಕಂಡುಬಂದು ಭಾನುವಾರ ಮುಂಜಾನೆ ಯುವತಿ ಸಾವನ್ನಪ್ಪಿದ್ದಾಳೆ. ಸಾವಿಗೆ ಹೃದಯಘಾತ ಕಾರಣ ಎಂದು ವೈದ್ಯರು ಹೇಳಿದ್ದಾರೆ.

ಮಣಿಪಾಲಗೆ ಶಿಫ್ಟ್ ಮಾಡಲು ಒಪ್ಪದ ಕಾರಣ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನಿಕಿತಾಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಲಾಗುತ್ತಿದೆ. ಮಗಳೇ ಇಲ್ಲದ ಮೇಲೆ ದೂರು ನೀಡುವುದು ಯಾಕೆ ಎಂದು ಪೊಲೀಸ್ ದೂರು ನೀಡಲು ಕುಟುಂಬಸ್ಥರು ಹಿಂದೇಟು ಹಾಕಿದ್ದಾರೆ.

ಮಂಗಳೂರಿನ ಕೆಪಿಟಿಯಲ್ಲಿ ನಿಕಿತಾ ಡಿಪ್ಲೋಮೋ ಮಾಡುತ್ತಿದ್ದರು. ಸಾವಿನ ನೋವಿನಲ್ಲಿ ಮರಣೋತ್ತರ ಪರೀಕ್ಷೆಗೂ ಕುಟುಂಬ ಒಪ್ಪಿಲ್ಲ. ಮರಣೋತ್ತರ ಪರೀಕ್ಷೆ ಆಗಿಲ್ಲದೆ, ಪೊಲೀಸ್ ದೂರು ಕೂಡ ದಾಖಲಾಗಿಲ್ಲ.  ಸದ್ಯ ವೈದ್ಯರ ನಿರ್ಲಕ್ಷದಿಂದ ವಿದ್ಯಾರ್ಥಿನಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಸಾವಿನ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾಗಿ ಅಭಿಯಾನ ಮಾಡಲಾಗುತ್ತಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯ ಹೆಚ್ಚಾಗಿದೆ.