ಇನ್ಮುಂದೆ ಎಣ್ಣೆ ಹೊಡೆದ್ರೆ ಕಿಕ್ ಬರಲ್ಲ, ರೇಟ್ ಕೇಳಿದ್ರೇನೆ ಕಿಕ್ ಹೊಡೆಯುತ್ತೆ – ಅಶೋಕ್ ಲೇವಡಿ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರ ಬಾರ್‌ಗಳಲ್ಲೂ ಎಣ್ಣೆ ರೇಟು ಜಾಸ್ತಿ ಮಾಡುತ್ತೆ. ಇನ್ಮುಂದೆ ಎಣ್ಣೆ ಹೊಡೆದ್ರೆ ಕಿಕ್ ಬರೋದಿಲ್ಲ, ರೇಟ್ ಕೇಳಿದ್ರೇನೆ ಕಿಕ್ ಹೊಡೆಯುತ್ತೆ ಎಂದು ಮಾಜಿ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಯಾವುದೇ ಯೋಜನೆ ಘೋಷಣೆ ಮಾಡೋದಕ್ಕೂ ಮುನ್ನ ಪೂರ್ವ ತಯಾರಿ ಇರಬೇಕು. ಕಾಂಗ್ರೆಸ್‌ನವರಿಗೆ ಗೆಲ್ತೀವಿ ಅಂತಾ ನಂಬಿಕೆಯೇ ಇರಲಿಲ್ಲ. ಗೆಲ್ತೀವಿ ಅಂತಾ ಗೊತ್ತಿದ್ರೆ ಯೋಜನೆ ಘೋಷಣೆ ಮಾಡ್ತಾ ಇರಲಿಲ್ಲ. ಸಮ್ಮಿಶ್ರ ಸರ್ಕಾರ ಬರುತ್ತೆ ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡೋಣ ಅಂದುಕೊಂಡಿದ್ದರು. ಆದ್ರೆ ಜೆಡಿಎಸ್ (JDS) ವೋಟ್ ಕಾಂಗ್ರೆಸ್‌ಗೆ ಶಿಫ್ಟ್ ಆಯ್ತು, ಹಾಗಾಗಿ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿದ್ದಾರೆ.

ಕರೆಂಟ್ ಬಿಲ್ ಜಾಸ್ತಿ ಬರ್ತಿದೆ ಅಂತಾ ಜನ ಉಗೀತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಲೋಡ್ ಶೆಡ್ಡಿಂಗ್ ಇರಲಿಲ್ಲ, ಕಾಂಗ್ರೆಸ್ ಬಂದ ಮೇಲೆ ಲೋಡ್ ಶೆಡ್ಡಿಂಗ್ ಸಮಸ್ಯೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರ, ಅಧಿಕಾರಕ್ಕೆ ಬರುತ್ತಿದ್ದಂತೆ ಮಳೆಯೂ ಕಡಿಮೆ ಆಯ್ತು, ಕೆಆರ್‌ಎಸ್ ಡ್ಯಾಂ ಖಾಲಿ ಆಗ್ತಿದ್ದು, ಎಲ್ಲಾ ಕಡೆ ಕುಡಿಯುವ ನೀರಿನ ಸಮಸ್ಯೆಯಾಗ್ತಿದೆ. ಬಾರ್‌ಗಳಲ್ಲೂ ಎಣ್ಣೆ ರೇಟು ಜಾಸ್ತಿ ಆಗುತ್ತೆ ಬರೆದಿಟ್ಟು ಕೊಳ್ಳಿ. ಇನ್ಮುಂದೆ ಎಣ್ಣೆ ಹೊಡೆದ್ರೆ ಕಿಕ್ ಬರೋದಿಲ್ಲ, ರೇಟ್ ಕೇಳಿದ್ರೆನೇ ಕಿಕ್ ಹೊಡೆಯುತ್ತೆ. ಪೆಟ್ರೋಲ್ ಡೀಸೆಲ್ ಬೆಲೆಯೂ ಜಾಸ್ತಿ ಆಗುತ್ತೆ ಎಂದು ಕಿಡಿ ಕಾರಿದ್ದಾರೆ.

ಯಾವುದೇ ಯೋಜನೆ ಘೋಷಣೆ ಮಾಡಬೇಕಾದ್ರೆ, ಒಳ್ಳೆಯದು, ಕೆಟ್ಟದ್ದನ್ನ ಯೋಚನೆ ಮಾಡಬೇಕು. ವೋಟಿಗೋಸ್ಕರ ಫ್ರೀ ಫ್ರೀ ಅಂತಾ ಭಾಷಣ ಮಾಡಿದ್ರು. ಡೋರ್ ಕಿತ್ತಾಕಿ ಬಸ್ ಒಳಗೆ ನುಗ್ಗೋ ಸ್ಕೀಂ ಬಹಳ ದಿನ ಉಳಿಯಲ್ಲ. ಇದು ಎಂಪಿ, ಜಿಪಂ, ಬಿಬಿಎಂಪಿ ಚುನಾವಣೆವರೆಗೆ ಮಾತ್ರ. ಆಮೇಲೆ ನರೇಂದ್ರಮೋದಿ ಬಂದು ಎಲ್ಲಾ ಕಟ್ ಮಾಡಿಬಿಟ್ರು ಅದಕ್ಕೆ ಎಲ್ಲಾ ಫ್ರೀ ಸ್ಕೀಂ ಸ್ಟಾಪ್ ಅಂತಾರೆ ಕಾದು ನೋಡಿ ಎಂದು ಹೇಳಿದ್ದಾರೆ.