ಸಿದ್ದರಾಮಣ್ಣ, ನಮಗೆಲ್ಲಾ ವಿಷದ ಬಾಟ್ಲಿ ಭಾಗ್ಯನೂ ಕೊಟ್ಬಿಡಿ: ಅಳಲು ತೋಡಿಕೊಂಡ ಆಟೋ ಚಾಲಕ

ಹುಬ್ಬಳ್ಳಿ: ಸಿದ್ದರಾಮಣ್ಣ ನೀವು ಬಂದ ತಕ್ಷಣ ನಮಗೆ ಯಾಕೆ ಈ ಶಿಕ್ಷೆ? ಇನ್ನೂ 2 ಭಾಗ್ಯ ಕೊಡಿ. ಒಂದು ಪುರುಷರಿಗೆ ಫ್ರೀ ಭಾಗ್ಯ, ಇನ್ನೊಂದು ನಮಗೆಲ್ಲ ವಿಷದ ಬಾಟಲಿ ಕೊಡಿಸಿ ಎಂದು ಆಟೋ ಚಾಲಕರೊಬ್ಬರು ಅಳಲು ತೋಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಮಹಿಳೆಯರಿಗೆ ಫ್ರೀ ಬಸ್ ಸಂಚಾರ ಹಿನ್ನೆಲೆ ಆಟೋ ಚಾಲಕರು ಸಂಕಷ್ಟಕ್ಕೆ ಗುರಿಯಾಗಿದ್ದು, ಇದರಿಂದಾಗಿ ಆಕ್ರೋಶಗೊಂಡ ಹುಬ್ಬಳ್ಳಿ ಆಟೋ ಚಾಲಕ ಮೃತ್ಯುಂಜಯ ವೀಡಿಯೋ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತನ್ನ ಅಳಲನ್ನು ಹೊರಹಾಕಿದ್ದಾರೆ.

ಸಿಎಂ ಅವರೇ ನಮಗೆ ವಿಷದ ಬಾಟಲಿ ಕೊಟ್ಟು, ನಿಮ್ಮ ಸರ್ಕಾರದಿಂದ ನಮಗೆ ಮರಣ ಭಾಗ್ಯ ಒದಗಿಸಿ. ನಿಮಗೆ ಮಹಿಳೆಯರು ಮಾತ್ರ ವೋಟ್ ಹಾಕಿಲ್ಲ, ಪುರುಷರು ಕೂಡಾ ವೋಟ್ ಹಾಕಿದ್ದಾರೆ. ನಮ್ಮ ಕಣ್ಣೀರು ಕಪಾಳಕ್ಕೆ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ನಿಮ್ಮ ತರಹ ಕೋಟಿ ರೂ.ಯ ವಾಚ್ ಕಟ್ಟಲ್ಲ. 10 ಕೆಜಿ ಅಕ್ಕಿ ಕೊಡ್ತೀನಿ ಎಂದು ಸಿದ್ದರಾಮಯ್ಯ ರೀತಿಯಲ್ಲಿಯೇ ಟಾಂಗ್ ನೀಡಿದ ಆಟೋ ಚಾಲಕ, ನಮಗೆ ಇರೋದೆ 10 ಕಿ.ಮೀ. ಅದರಲ್ಲೂ ನೀವು ಫ್ರೀ ಕೊಟ್ಟೀದ್ದೀರಿ. ಹೀಗಾಗಿ ನಮಗೆ ಬದುಕೋಕೆ ಆಗ್ತಿಲ್ಲ. ನಗರದಲ್ಲಿ ಕೊಲೆ ಸುಲಿಗೆ ಹೆಚ್ಚಾಗುತ್ತೆ. ಇದಕ್ಕೆಲ್ಲ ಕಾರಣ ನೀವೆ, ನಿಮ್ಮ ರಾಜಕೀಯಕ್ಕಾಗಿ ನಮ್ಮನ್ನು ಬಲಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.