ದಿನದಿಂದ ದಿನಕ್ಕೆ ಕುಸಿಯುತ್ತಿದೆ KRS ಡ್ಯಾಂನ ನೀರಿನ ಮಟ್ಟ; ಬೆಂಗಳೂರಿಗರಿಗೂ ಕಾದಿದೆ ಜಲಂಕಂಟಕ

ಮಂಡ್ಯ: ರಾಜ್ಯದ ಹಲವೆಡೆ ಮುಂಗಾರು ಮಳೆಯ ಅಬ್ಬರ ಶುರುವಾಗಿದ್ದರೆ, ಇನ್ನು ಕೆಲವೆಡೆ ಮಳೆಯ ಸುಳಿವೇ ಇಲ್ಲದಂತಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಆಧಾರವಾಗಿದ್ದ ಎಷ್ಟೋ ನದಿಗಳು ಬತ್ತಿದೆ. ಅದರಂತೆ ಇದೀಗ ಮಂಡ್ಯ ಜಿಲ್ಲೆಯ ಜೀವನದಿಯಾದ ಕೃಷ್ಣರಾಜಸಾಗರ ಜಲಾಶಯ(KRS)ದ ನೀರಿನ ಮಟ್ಟವು 79 ಅಡಿಗೆ ಕುಸಿದಿದೆ. ಹೌದು ದಿನದಿಂದ ದಿನಕ್ಕೆ ನೀರಿನ ಮಟ್ಟವು ಕುಸಿಯುತ್ತಾ ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದ ನೀರಿನ ಮಟ್ಟದಲ್ಲಿ 22 ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಾಗಿತ್ತು. ಇನ್ನೂ ಮುಂಗಾರು ಮಳೆ ತಡವಾದ್ರೆ ರಾಜಧಾನಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿಯಿದೆ.

ಇದೀಗ ಕೆಆರ್‌ಎಸ್ ಡ್ಯಾಂ‌ಂನಲ್ಲಿ‌ ಕೇವಲ 10 ಟಿಎಂಸಿ ನೀರು ಮಾತ್ರ ಇದೆ. ಅದರಲ್ಲಿ ಬಳಕೆಗೆಂದು ಇರುವುದು 3 ಟಿಎಂಸಿ‌ ನೀರು. ಉಳಿದ 7 ಟಿಎಂಸಿ ಡೆಡ್ ಸ್ಟೋರೇಜ್ ನೀರು. 124.80 ಗರಿಷ್ಠ ಮಟ್ಟದ ಡ್ಯಾಂ‌ಂನಲ್ಲಿ 79.02 ಅಡಿಯಷ್ಟೇ ನೀರಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಬರೊಬ್ಬರಿ 22 ಅಡಿಯಷ್ಟು ನೀರು ಪ್ರಮಾಣ ಕುಸಿತವಾಗಿದೆ. ಕಳೆದ ವರ್ಷ ಇದೇ ದಿನ 104.07 ಅಡಿ ನೀರು ಸಂಗ್ರಹವಾಗಿತ್ತು. ಇದೀಗ49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಡ್ಯಾಂನಲ್ಲಿ ಸದ್ಯ 11.837 ಟಿಎಂಸಿಯಷ್ಟು ನೀರು ಸಂಗ್ರಹ ಇದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಲ್ಲದ್ದರಿಂದ ಕೆಆರ್‌ಎಸ್‌ ಡ್ಯಾಂ ನೀರಿನ ಮಟ್ಟ ಕುಸಿದಿದೆ. ಹೌದು ಐದು ವರ್ಷದಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ನೀರಿನ ಮಟ್ಟ ಕುಸಿದಿದ್ದು, ಬೆಂಗಳೂರು ಮಾತ್ರವಲ್ಲದೆ ಕಾವೇರಿ ನೀರು ಅವಲಂಬಿಸಿರುವ ನಗರಗಳಲ್ಲೂ ನೀರಿನ ಹಾಹಾಕಾರ ಎದುರಾಗುವ ಸಾಧ್ಯತೆಯಿದೆ. ಇದರ ಜೊತೆ ಕೆಆರ್‌ಎಸ್‌ ಡ್ಯಾಂ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ರೈತರಿಗೆ ಬೆಳೆ ನಷ್ಟದ ಭೀತಿ ಎದುರಾಗಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್‌ನಲ್ಲಿ ಸದ್ಯ 79.02 ಅಡಿಯಷ್ಟೇ ನೀರು ಸಂಗ್ರಹವಾಗಿದೆ. ಇದು ಕೂಡ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಮುಂಗಾರು ಪೂರ್ವ ಮಳೆ ಈ ಬಾರಿ ಕೈ ಕೊಟ್ಟಿದೆ. ಕಳೆದ ವರ್ಷಕ್ಕೆ ಇದೇ ವೇಳೆ ಉತ್ತಮ ಮಳೆಯಾಗಿತ್ತು. ಈ ಬಾರಿ ಮಳೆಯ ಕೊರತೆಯಿಂದ ದಿನದಿಂದ ದಿನಕ್ಕೆ ಜಲಾಶಯದ ನೀರಿನ ಮಟ್ಟ ಕುಸಿಯತೊಡಗಿದೆ. ಪ್ರಸ್ತುತ ಜಲಾಶಯದಲ್ಲಿ ಕುಡಿಯುವ ನೀರಿಗೆ ಅಗತ್ಯವಿರುವಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಇನ್ನು ಕೃಷಿ ಚಟುವಟಿಕೆ ಆರಂಭಕ್ಕೆ ಸಿದ್ಧರಾಗಿರುವ ರೈತರು ಈಗ ಮುಂಗಾರು ಮಳೆಯತ್ತ ದೃಷ್ಟಿಹರಿಸಿದ್ದಾರೆ.