ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ: ಮೂವರು ಪೊಲೀಸರ ದುರ್ಮರಣ

ಆಂಧ್ರ ಪ್ರದೇಶ: ಬೆಳ್ಳಂಬೆಳಗ್ಗೆ ಚಿತ್ತೂರಿನ ಸಮೀಪ ಭೀಕರ ರಸ್ತೆ ದುರಂತ ಸಂಭವಿಸಿದೆ. ಅಪಘಾತದಲ್ಲಿ ಬೆಂಗಳೂರಿನ ಮೂವರು ಪೊಲೀಸರು ಸಾವನ್ನಪ್ಪಿದ್ದಾರೆ. ಪೊಲೀಸರು ಕರ್ತವ್ಯದ ಮೇರೆಗೆ ತಿರುಪತಿಗೆ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ.

ಘಟನೆಯ ವಿವರ:

ಗಾಂಜಾ ಕೇಸ್ ಸಂಬಂಧ ಆರೋಪಿಯನ್ನು ಬಂಧಿಸಲು ಬೆಂಗಳೂರಿನ ಶಿವಾಜಿನಗರದ ಐವರು ಪೊಲೀಸರು ತಿರುಪತಿಗೆ ತೆರಳುತ್ತಿದ್ದರು. ಈ ವೇಳೆ ಪುತಲಪಟ್ಟು ಮಂಡಲದ ಪಿ. ಕೊಟ್ಟಕೋಟದಲ್ಲಿ ಪೊಲೀಸರು ತೆರಳುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಪಿಎಸ್ ಐ ಅವಿನಾಶ್ (29) ಕಾನ್ಸ್ಟೇಬಲ್ ಅನಿಲ್ ಮುಳಿಕ್ (26) ಕ್ಯಾಬ್ ಚಾಲಕ ಜೋಸೆಫ್ (28) ಮೃತಪಟ್ಟ ಪೊಲೀಸ್ ಅಧೀಕಾರಿಗಳು. ಕಾನ್ಸ್ಟೇಬಲ್‌ಗಳಾದ ದೀಕ್ಷಿತ್ ಹಾಗೂ ಶರಣ ಬಸವ ಗಂಭೀರ ಗಾಯಗೊಂಡಿದ್ದು ಚಿತ್ತೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಚಿತ್ತೂರು ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಪೊಲೀಸ್ ಸಿಬ್ಬಂದಿ ಸಾವಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ ಮಿಡಿದಿದ್ದಾರೆ. ಘಟನೆ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬದ ಜೊತೆಗೆ ಇಲಾಖೆ ಇರಲಿದೆ ಟ್ವೀಟ್ ಮೂಲಕ ತಿಳಿಸಿದ್ದಾರೆ.