ಮುಜರಾಯಿ ಇಲಾಖೆ ನಿರ್ಲಕ್ಷ್ಯ, ದಾರುಣ ಪರಿಸ್ಥಿತಿಯಲ್ಲಿ ಭಕ್ತರು, ಮೈಲಾರ ಮಲ್ಲಣ್ಣ ದೇವಸ್ಥಾನದ ಬಯಲಿನಲ್ಲೇ ಬಿಡಾರ ಹೂಡುತ್ತಾರೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪಾರ ಪ್ರಮಾಣದ ಭಕ್ತರನ್ನ ಹೊಂದಿರುವ ಪ್ರಸಿದ್ಧ ದೇವಸ್ಥಾನವದು. ರಾಜ್ಯದಿಂದಷ್ಟೇ ಅಲ್ಲದೆ ಹೊರರಾಜ್ಯದಿಂದಲೂ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಸ್ನಾನದಿಂದ ಹಿಡಿದು, ಕುಡಿಯುವ ನೀರಿನವರೆಗೂ ಹತ್ತಾರು ಸಮಸ್ಯೆಗಳು ಇಲ್ಲಿನ ಭಕ್ತರನ್ನ ಕಾಡುತ್ತಿದೆ. ಸರಕಾರದ ಸುಪರ್ದಿಯಲ್ಲಿರುವ ಈ ದೇವಸ್ಥಾನವನ್ನ ಮುಜರಾಯಿ ಇಲಾಖೆ ನಿರ್ಲಕ್ಷ ಮಾಡಿದ್ದು ಭಕ್ತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ… ರಾಜ್ಯದಲ್ಲಷ್ಟೇ ಅಲ್ಲದೆ ಹೊರರಾಜ್ಯದಲ್ಲಿಯೂ ಅಪಾರ ಪ್ರಮಾಣದ ಭಕ್ತರನ್ನ ಹೊಂದಿರುವ ದಕ್ಷಿಣದ ಕಾಶಿ ಅಂತಾ ಕರೆಯಿಸಿಕೊಳ್ಳುವ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿಲ್ಲ ಮೂಲ ಭೂತ ಸೌಲಭ್ಯ. ಮುಜರಾಯಿ ಇಲಾಖೆ ಸುಪರ್ದಿಗೆಯಲ್ಲಿದ್ದರೂ ಎದ್ದು ಕಾಣುತ್ತಿದೆ ಮೂಲಭೂತ ಸೌಲಭ್ಯದ ಕೊರತೆ…. ವಸತಿ, ಸ್ನಾನದ ಗೃಹಗಳು, ಕುಡಿಯುವ ನೀರಿನ ಸಮಸ್ಯೆಯಿಂದ ಬಯಲು ಪ್ರದೇಶಗಳಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ಹೋಗಬೇಕಾದ ಸ್ಥಿತಿ ಭಕ್ತರದ್ದು…. ಪ್ರತಿ ವರ್ಷ ಸರಕಾರಕ್ಕೆ ಲಕ್ಷಾಂತರ ರೂಪಾಯಿ ಆದಾಯ ತಂದು ಕೊಡೊ ದೇವಸ್ಥಾನ ಸೌಲಭ್ಯದಿಂದ ವಂಚಿತ….

ಹೌದು ದಕ್ಷಿಣ ಕಾಶಿ ಅಂತಲೇ ಫೇಮಸ್ ಆಗಿರುವ ಆ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿಗೆ ಬರುವ ಸಾವಿರಾರು ಭಕ್ತರು ಹತ್ತಾರು ಸಮಸ್ಯೆಗಳ ನಡುವೆ ದೇವರ ಹರಕೆ ತಿರಿಸಿ ತಮ್ಮ ತಮ್ಮ ಮನೆಗೆ ಹೋಗುತ್ತಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿರುವ ಮೈಲಾರ ಮಲ್ಲಣ್ಣ ದೇವಾಲಯ ಐದು ಶತಮಾನಗಳಷ್ಟೂ ಹಳೆಯದಾದ ದೇವಾಲಯವಾಗಿದೆ.

ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರದಿಂದ ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಹೋಗುತ್ತಾರೆ. ಪ್ರತಿ ವರ್ಷ ಚಟ್ಟಿ ಅಮಾವಾಸ್ಯೆಯಿಂದ ಬರೋಬ್ಬರಿ ಒಂದು ತಿಂಗಳುಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತಿದೆ. ಈ ಒಂದು ತಿಂಗಳ ಅವಧಿಯಲ್ಲಿ 50 ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಬಂದು ದೇವಸ್ಥಾನದ ಆವರಣದಲ್ಲಿಯೇ ರಾತ್ರಿಯಿಡಿ ಕಳೆದು, ಇಲ್ಲಿಯೇ ಅಡುಗೆ ಮಾಡಿಕೊಂಡು ದೇವರ ದರ್ಶನ ಮಾಡುತ್ತಾರೆ.

ಇದಷ್ಟೇ ಅಲ್ಲದೆ ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಪ್ರತಿ ರವಿವಾರದಂದು ಕೂಡಾ ಸಾವಿರಾರು ಭಕ್ತರು ಇಲ್ಲಿಗೆ ಬಂದು ತಮ್ಮ ಹರಕೆ ತಿರಿಸಿ ಹೋಗುತ್ತಾರೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಕೂಡಾ ದೇವರಿಗೆ ಹರಕೆ ರೂಪದಲ್ಲಿ ತೆಂಗಿನಕಾಯಿಯ ಹೋಳು ಮತ್ತು ಭಂಡಾರವನ್ನು ಮಿಶ್ರಣ ಮಾಡಿ ಹಾರಿಸುತ್ತಾರೆ ಎನ್ನುತ್ತಾರೆ ಮಲ್ಲಿಕಾರ್ಜುನ್ ಮೈಲಾರ ಮಲ್ಲಣ್ಣ ದೇವಾಲಯದ ಪೂಜಾರಿ.

ಇತಿಹಾಸ ಪ್ರಸಿದ್ಧ ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ಹರಕೆ ತೀರಿಸಿ ದೇವರ ದರ್ಶನ ಪಡೆದುಕೊಂದು ಹೋಗುತ್ತಾರೆ. ಕೆಲವು ಭಕ್ತರು ಇಲ್ಲಿಯೇ ವಸತಿಗೆ ಉಳಿದುಕೊಂಡು ದೇವರ ದರ್ಶಣ ಮಾಡಿಕೊಂಡು ಹೋಗುತ್ತಾರೆ. ಇಲ್ಲಿ ವಸತಿಗಾಗಿ ಉಳಿದುಕೊಳ್ಳುವ ಭಕ್ತರಿಗೇ ಅಂತಾ ವಸತಿ ಗೃಹ ನಿರ್ಮಾಣ ಮಾಡಿದೆ. ಆದರೆ ಅವು ಶ್ರೀಮಂತ ಭಕ್ತರಿಗಷ್ಟೇ ಕೊಡುತ್ತಿದ್ದು, ಬಡ ಭಕ್ತರಿಗೆ ಈ ವಸತಿ ನಿಲಯ ಇದ್ದೂ ಇಲ್ಲದಂತಾಗಿದೆ.

ಹೀಗಾಗಿ ಅನಿವಾರ್ಯವಾಗಿ ಭಕ್ತರು ಗಿಡದ ನೆರಳಿನಲ್ಲಿ ಬಯಲು ಪ್ರದೇಶದಲ್ಲಿ ಅಡುಗೆ ಮಾಡಿ ಊಟ ಮಾಡಿಕೊಂಡು ರಾತ್ರಿ ಕಳೆಯುವಂತಾ ಸ್ಥಿತಿ ಇಲ್ಲಿನ ಭಕ್ತರಿಗಿದೆ. ಇಲ್ಲಿಗೆ ಬರುವ ಭಕ್ತರಿಗೆ ಸರಿಯಾಗಿ ಸ್ನಾನದ ವ್ಯವಸ್ಥೆ ಕೂಡಾ ಇಲ್ಲಿಲ್ಲ. ಶತಮಾನದಷ್ಠು ಪುರಾತನವಾದ ನೀರಿನ ಹೊಂಡಗಳು ಕೂಡಾ ಇಲ್ಲಿದ್ದು, ಅವುಗಳನ್ನ ಸ್ವಚ್ಚಗೊಳಿಸಿ ಭಕ್ತರ ಸ್ನಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿಲ್ಲ.

ಇದರಿಂದಾಗಿ ಅಲ್ಲಿನ ಕಲ್ಮಷ ನೀರಿನಲ್ಲಿಯೇ ಭಕ್ತರು ಸ್ನಾನ ಮಾಡುವಂತಾ ಸ್ಥಿತಿ ಇದೆ. ಇದರ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನ ಸಹಿತ ಇಲ್ಲಿ ಯಾರೂ ಮಾಡಿಲ್ಲ. ಮನೆಯಿಂದಲೇ ಕುಡಿಯುವ ನೀರು ತೆಗೆದುಕೊಂಡು ಬರಬೇಕಾದ ಸ್ಥಿತಿ ಇಲ್ಲಿನ ಭಕ್ತರದ್ದು. ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಸ್ಥಾನಕ್ಕೆ ವರ್ಷಕ್ಕೆ ಕೊಟ್ಯಾಂತರ ರೂಪಾಯಿ ಹಣ ಹರಿದುಬರುತ್ತದೆ. ಆದರೆ ಭಕ್ತರು ಕಾಣಿಕೆಯಾಗಿ ನೀಡಿದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಯಾರಿಗೂ ಕೂಡಾ ಅರ್ಥವಾಗುತ್ತಿಲ್ಲ. ಹೀಗಾಗಿ ಭಕ್ತರು ಮೂಲಭೂತ ಸೌಲಭ್ಯ ವಂಚಿತರಾಗಿಯೇ ದೇವರ ದರ್ಶನ ಪಡೆದುಹೋಗುವಂತಾ ಸ್ಥಿತಿ ಇಲ್ಲಿ ಭಕ್ತರಿಗಿದೆ. ಜಿಲ್ಲಾಢಳಿತ ಭಕ್ತರು ನೀಡಿರುವ ಹಣವನ್ನಾದರೂ ಬಳಸಿಕೊಂಡು ಇಲ್ಲಿ ಕುಡಿಯುವ ನೀರು, ವಸತಿ ಗೃಹ, ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಿಕೊಡಿ ಎಂದು ಇಲ್ಲಿನ ಭಕ್ತರು ಜಿಲ್ಲಾಡಳಿತಕ್ಕೆ ವಿನಂತಿಸುತ್ತಿದ್ದಾರೆ.

ಇತಿಹಾಸ ಪ್ರಸಿದ್ಧ ಕಲ್ಯಾಣಿ ನೀರಿನ ಹೊಂಡದಲ್ಲಿನ ನೀರು ಕೂಡಾ ಮಲಿನವಾಗಿದೆ. ಸಾವಿರಾರು ಭಕ್ತರು ಬರುವ ಯಾತ್ರಾ ಸ್ಥಳದಲ್ಲಿ ಕುಡಿಯಲು ಹಾಗೂ ಸ್ನಾನಕ್ಕೆ ನೀರಿಲ್ಲ. ಇದಕ್ಕೆ ಇಲ್ಲಿಗೆ ಬರುವ ಭಕ್ತರಿಗೆ ಜಿಲ್ಲಾಡಳಿತದಿಂದ ಶುದ್ಧ ಕುಡಿಯುವ ನೀರು ಸ್ನಾನಕ್ಕೆ ಅನೂಕೂಲ ಕಲ್ಪಿಸಿದರೇ ಭಕ್ತರು ಖುಷಿಯಾಗಿ ದೇವರ ದರ್ಶನ ಮಾಡಿಕೊಂಡು ಹೋಗಬಹುದೆಂಬುದು ಇಲ್ಲಿನ ಭಕ್ತರ ಆಶಯವಾಗಿದೆ. ಇನ್ನು ಇಲ್ಲಿನ ಐತಿಹಾಸಿಕ ಹೊಂಡಗಳನ್ನು ಕೂಡಾ ರಕ್ಷಣೆ ಮಾಡುವಲ್ಲಿ ಪುರಾತತ್ವ ಇಲಾಖೆ ಮುಂದಾಗಿಲ್ಲ. ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ.