ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ: ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು (ಜೂ.19): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಇಂದಿರಾ ಕ್ಯಾಂಟೀನ್‌ ಬಲಪಡಿಸುವುದಾಗಿ ಮುಖ್ಯಮಂತ್ರಿ ಹಾದಿಯಾಗಿ ಅನೇಕ ಸಚಿವರು ಹೇಳಿದ್ದರು. ಈಗ ರಾಜ್ಯ ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟದ ಮೆನು ಬದಲಾವಣೆ ಮಾಡಿ ಗುಣಮಟ್ಟದ ಶುಚಿ-ರುಚಿ ಊಟ ನೀಡಲು ನಿರ್ಧಾರ ಮಾಡಲಾಗಿದೆ.

ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಐಟಂಗಳ ಸೇರ್ಪಡೆ ಮಾಡಲು ಕಾಂಗ್ರೆಸ್‌ ಸರ್ಕಾರದಿಂದ ತೀರ್ಮಾನ ಮಾಡಲಾಗಿದೆ. ಬೆಳಗ್ಗೆ ತಿಂಡಿ ಮೆನುವಿನಲ್ಲಿ ಬ್ರೆಡ್ ಜಾಮ್ ಹಾಗೂ ಮಂಗಳೂರು ಬನ್ಸ್ ನೀಡಲು ಕೂಡ ತೀರ್ಮಾನಿಸಲಾಗಿದೆ. ಇನ್ನು ಮಧ್ಯಾಹ್ನದ ಊಟದಲ್ಲಿ ದಕ್ಷಿಣ ಕರ್ನಾಟಕ ಶೈಲಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಪ್ರಸಿದ್ಧವಾದ ಮುದ್ದೆ, ಸೊಪ್ಪು ಸಾರು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ಊಟಕ್ಕೆ ಸಿಗಲಿದೆ ಒಂದು ಸಿಹಿ ಪಾಯಸ ಅಥವಾ ಸಿಹಿ ತಿಂಡಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಸಿದ್ಧಪಡಿಸಿ ಹೊಸ ಮೆನು ಇಲ್ಲಿದೆ: ಆದ್ದರಿಂದ ಇಂದಿರಾ ಕ್ಯಾಂಟಿನ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಪಾಯಸವನ್ನು ನೀಡಲು ಬಿಬಿಎಂಪಿ ಮೆನು ಪಟ್ಟಿಯಲ್ಲಿ ಹೊಸದಾಗಿ ಪಾಯಸವನ್ನು ಸೇರ್ಪಡೆ ಮಾಡಿದೆ. ಒಂದು ದಿನ ಬಿಟ್ಟು ದಿನ ಮುದ್ದೆ ಊಟ ಒದಗಿಸುವ ಕುರಿತು ನಿರ್ಧಾರ ಮಾಡಲಾಗಿದೆ. ಮುದ್ದೆ ಇಲ್ಲದ ದಿನ ಚಪಾತಿ, ಸಾಗು ಊಟ ನೀಡಲು ಹೊಸ ಮೆನು ಮೂಲಕ ಯೋಜನೆ ಮಾಡಲಾಗಿದೆ. ಊಟ ಒದಗಿಸುವ ಏಜೆನ್ಸಿಗಳು ಈ ಹೊಸ ಮೆನುವಿನಲ್ಲಿರುವ ಊಟವನ್ನು ಕೊಡಲು ಫೈನಲ್ ಆಗುತ್ತಿದ್ದಂತೆ ಹೊಸ ಮೆನು ಪ್ರಕಾರ ಊಟ ಜಾರಿಗೆ ಬರಲಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗ್ಗಿನ ತಿಂಡಿಗಳು: ಇಡ್ಲಿ, ಪುಳಿಯೊಗರೆ, ಖಾರಾಬಾತ್, ಪೊಂಗಲ್‌, ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್‌ಮ ಕೇಸರಿಬಾತ್‌ & ಕೇಸರಿಬಾತ್‌ ನೀಡಲಾಗುತ್ತಿತ್ತು. ಈಗ ಅದಕ್ಕೆ ಹೊಸ ಸೇರ್ಪಡೆಯಾಗಿ ಬ್ರೆಡ್‌ ಜಾಮ್‌ ಮತ್ತು ಮಂಗಳೂರು ಬನ್ಸ್‌ ನೀಡಲು ತೀರ್ಮಾನ ಮಾಡಲಾಗಿದೆ. ಇನ್ನು ಈವರೆಗೆ ಬೆಂಗಳೂರಿನಲ್ಲಿ ಬೆಳಗ್ಗಿನ ತಿಂಡಿಗೆ ಕೇವಲ 5 ರೂ. ಇದ್ದು, ಅದನ್ನು ರೂ.10ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಒಟ್ಟಾರೆ ರಾಜ್ಯದ ಎಲ್ಲ ಪ್ರಾದೇಶಿಕ ವಿಭಾಗಗಳ ಜನರಿಗೂ ಅನುಕೂಲ ಆಗುವಂತೆ ಆಯಾ ಶೈಲಿಯ ತಿಂಡಿಯನ್ನು ಕೊಡಲು ತೀರ್ಮಾನಿಸಲಾಗಿದೆ.

ಮಧ್ಯಾಹ್ನದ ಊಟ: ಇನ್ನು ಮಧ್ಯಾಹ್ನ ಊಟಕ್ಕೆ 10 ರೂ. ಬೆಲೆಯಿದೆ. ಊಟದಲ್ಲಿ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ ಮಾತ್ರ ನೀಡಲಾಗುತ್ತಿತ್ತು. ಈಗ ಅದರ ಜೊತೆಗೆ ಹೊಸದಾಗಿ ಸಿಹಿ ಪಾಯಸ ಮತ್ತು ದಿನ ಬಿಟ್ಟು ದಿನ ಮುದ್ದೆ, ಸೊಪ್ಪುಸಾರು ಊಟ ಹಾಗೂ ಮುದ್ದೆ ಇಲ್ಲ ದಿನ ಚಪಾತಿ, ಸಾಗು ನೀಡಲು ಮೆನು ಸಿದ್ಧಪಡಿಸಲಾಗಿದೆ. ಈ ಮೂಲಕ ಬಡವರಿಗೆ ಹೊಟ್ಟೆತುಂಬ ಇಷ್ಟವಾದ ಆಹಾರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ರಾತ್ರಿ ಊಟ: ಟೊಮೆಟೋ ಬಾತ್‌, ಮೊಸರನ್ನ, ವಾಂಗಿಬಾತ್‌, ಬಿಸಿಬೆಳೆ ಬಾತ್, ಮೆಂತ್ಯೆ ಪಲಾವ್‌, ಪುಳಿಯೊಗರೆ, ಪಲಾವ್‌ ನೀಡಲಾಗುತ್ತಿದೆ. ಅದನ್ನೇ ಮುಂದುವರೆಸಲು ತೀರ್ಮಾನ ಕೈಗೊಳ್ಳಲಾಗಿದೆ. ರಾತ್ರಿ ಮೆನುವಿನಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ.