ಸಾಲ ವಸೂಲಿಗೆ ಬಂದಿದ್ದ ಸಹಕಾರಿ ಸಂಘದ ಸಿಇಓ ಅಧಿಕಾರಿಯನ್ನೇ ಗ್ರಾಮದಿಂದ ಹೊರಕ್ಕೆ ಹಾಕಿದ ಸ್ತ್ರೀಶಕ್ತಿ ಸಂಘ!

ಟೇಕಲ್‌ (ಜೂ.18) ಚುನಾವಣೆ ಸಮಯದಲ್ಲಿ ಕಾಂಗ್ರೇಸ್‌ ಸರ್ಕಾರವು ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿ ಮತ ಹಾಕಿಸಿಕೊಂಡು ಈಗ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮದ ಸ್ತ್ರೀಶಕ್ತಿ ಸಂಘದ ಮಹಿಳೆಯರು ಸಾಲ ವಸೂಲಿಗೆ ಹೋದ ದಿನ್ನೇರಿಹಾರೋಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಎಚ್‌.ವಿ.ತಿರುಮೇಗೌಡ ಹಾಗೂ ಸಿಬ್ಬಂದಿಯನ್ನು ಗ್ರಾಮದಿಂದ ಹೊರ ಹಾಕಿದ ಘಟನೆ ಶನಿವಾರ ನಡೆದಿದೆ.

ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು, ಸಹಕಾರ ಸಂಸ್ಥೆಗಳಿಂದ ಮಹಿಳಾ ಸಂಘಗಳು ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರು ಸಾಲ ಮರುಪಾವತಿ ಮಾಡದೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ಡಿಸಿಸಿ ಬ್ಯಾಂಕ್‌ ನೀಡಿದ್ದ ಸಾಲವು ಮರುಪಾವತಿ ಮಾಡದೆ ಸಾಲ ವಸೂಲಾತಿಯಲ್ಲಿ ಹಿನ್ನಡೆಯಾಗುತ್ತಿದೆ.

ರಾಜೇನಹಳ್ಳಿ ಗ್ರಾಮದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರುಗಳು ಮೊದಲಿನಿಂದಲೂ ಸಾಲ ತೆಗೆದುಕೊಂಡು ಸಮರ್ಪಕವಾಗಿ ಮರುಪಾವತಿ ಮಾಡುತ್ತಿದ್ದರು ಮತ್ತು ಸಂಘಗಳಲ್ಲಿ ಉತ್ತಮ ಠೇವಣಿ ಸಂಗ್ರಹವು ನಡೆಯುತ್ತಿತ್ತು. ಆದರೆ ಶನಿವಾರ ದಿನ್ನೇರಿಹಾರೋಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಎಚ್‌.ವಿ.ತಿರುಮೇಗೌಡರು ತಮ್ಮ ಸಿಬ್ಬಂದಿಯೊಂದಿಗೆ ಸಾಲ ವಸೂಲಿಗೆ ಹೋದಾಗ ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರು ಸಾಲ ಮನ್ನ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಆದ್ದರಿಂದ ನಾವು ಸಾಲ ಮರುಪಾವತಿ ಮಾಡುವುದಿಲ್ಲ. ನೀವು ಸಾಲ ವಸೂಲಿಗೆ ನಮ್ಮ ಮನೆ ಬಾಗಿಲಿಗೆ ಬರಬಾರದೆಂದು ಸೂಚಿಸಿದ್ರು.

ಸಿಇಒ ಹೆಚ್‌.ವಿ.ತಿರುಮೇಗೌಡರು ಮಾತನಾಡಿ, ಮುಖ್ಯಮಂತ್ರಿಗಳು ಘೋಷಣೆ ಮಾಡುವವರೆಗೆ ತಾವುಗಳು ನಿಮ್ಮ ಸಂಘಗಳ ಸಾಲದ ಹಣ ಕಟ್ಟಲೇಬೇಕು. ತಾವು ಮರುಪಾವತಿ ಮಾಡಿದಿದ್ದರೆ ತಮ್ಮ ಸಾಲ ಬಡ್ಡಿರಹಿತ ಸಾಲವಾಗಿದ್ದು, ತಿಂಗಳು ವಿಳಂಬವಾದರೆ ಬಡ್ಡಿ ತೆರಬೇಕಾಗುತ್ತದೆ ಎಂದರು. ಇದಕ್ಕೆ ಕಿವಿಗೊಡದ ಮಹಿಳೆಯರು ಅಧಿಕಾರಿ ಜತೆ ಮಾತಿನ ಚಕಮಕಿ ನಡೆಸಿ, ಸಾಲ ವಸೂಲಿ ಅಧಿಕಾರಿಗಳನ್ನು ಗ್ರಾಮದಿಂದ ಹೊರಹಾಕಿದರು.