ಅಕ್ಕಿ ಗೋಡೌನ್ ಮೇಲೆ ರೈಡ್.! ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನೂರಾರು ಕ್ವಿಂಟಾಲ್ ಅಕ್ಕಿ ವಶ.!

ಭಟ್ಕಳ: ಅಕ್ರಮ ಪಡಿತರ ಅಕ್ಕಿಯನ್ನು ಸಂಗ್ರಹಿಸಿದ ಮಾಹಿತಿ ತಿಳಿದು ಕಡಸಲಗದ್ದೆಯ ಕ್ಯಾಶ್ಯು ಗೋದಾಮಿನ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿ 900 ಕ್ಕೂ ಅಧಿಕ ಪಡಿತರ ಅಕ್ಕಿ ಚೀಲಗಳನ್ನ ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕರ ದೂರಿನ್ವಯ ಭಟ್ಕಳ ತಹಸೀಲ್ದಾರ ಡಾ. ಸುಮಂತ ಹಾಗೂ ನಗರ ಠಾಣೆ ಸಿಪಿಐ ದಿವಾಕರ ಹಾಗೂ ಗ್ರಾಮೀಣ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ ಅವರ ನೇತೃತ್ವದಲ್ಲಿ ಗೋದಾಮಿನ ಮೇಲೆ ದಾಳಿ ನಡೆಸಲಾಗಿದೆ.

ವಿವಿಧ ಕಡೆಗಳಿಂದ ಅಕ್ಕಿಯನ್ನು ಪಡೆದು ಅಕ್ರಮವಾಗಿ ಸಂಗ್ರಹಿಸಲಾಗುತ್ತಿತ್ತು. ಬಳಿಕ ಕಡಸಲಗದ್ದೆಯ ನಿರ್ಜನ ಪ್ರದೇಶದ ಹಳೆಯ ಕ್ಯಾಶ್ಯು ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಒಂದುಸಲ ಹೌಹಾರಿದ್ದಾರೆ. ಗೋದಾಮಿನೊಳಗೆ ಅಂದಾಜು 900 ಕ್ಕೂ ಹೆಚ್ಚು ಚೀಲದಲ್ಲಿ 300 ಕ್ವಿಂಟಾಲ್ ಗೂ ಅಧಿಕ ಅಕ್ಕಿಯನ್ನು ಸಂಗ್ರಹಿಸಿಡಲಾಗಿತ್ತು ಎಂದು ತಿಳಿದು ಬಂದಿದೆ.

ಇನ್ನು ಗೋದಾಮಿನಲ್ಲಿ ನಾನಾ ಕಡೆಯಿಂದ ಸಂಗ್ರಹಿಸಿದ ಅಕ್ಕಿಯನ್ನು ಸಿಮೆಂಟ್ ಚೀಲದಲ್ಲಿ ತುಂಬಿಸಿ ಯಂತ್ರದಿಂದ ಹೊಲಿಗೆ ಮಾಡಿರುವುದು ಕಂಡು ಬಂದಿದೆ. ಹಾಗೂ ಸಾಕಷ್ಟು ಗೋಣಿ ಚೀಲಗಳನ್ನು ಸಹ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ಗೋದಾಮು ಸಹಿತ 900 ಕ್ಕೂ ಅಧಿಕ ಅಕ್ಕಿ ಚೀಲ ಹಾಗೂ ಚೀಲ ಹೊಲಿಯುವ ಯಂತ್ರವನ್ನು ಜಪ್ತಿ ಮಾಡಲಾಗಿದೆ. ಅಧಿಕಾರಿಗಳ ದಾಳಿಯ ಸುಳಿವು ಸಿಕ್ಕ ತಕ್ಷಣ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಆಹಾರ ನಿರೀಕ್ಷಕ ಪಾಂಡು ನಾಯ್ಕ, ಕಂದಾಯ ನಿರೀಕ್ಷಕ ವಿಶ್ವನಾಥ ಗಾಂವಕರ್, ಗ್ರಾಮೀಣ ಠಾಣೆ ಪಿಎಎಸ್ ಐ ಭರತಕುಮಾರ, ನಗರ ಠಾಣೆ ಪಿಎಸ್ ಐ ಸುಮಾ ಬಿ, ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

.