ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​​ನಲ್ಲಿ ಅವಕಾಶ ಸಿಗದ ಬಗ್ಗೆ ಮೌನ ಮುರಿದ ಆರ್. ಅಶ್ವಿನ್: ಏನಂದ್ರು ಗೊತ್ತೇ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಮುಕ್ತಾಯಗೊಂಡಾಗಿದೆ. ಟೀಮ್ ಇಂಡಿಯಾ ಸೋತರೆ ಆಸ್ಟ್ರೇಲಿಯಾ ಪ್ರಶಸ್ತಿ ಎತ್ತಿ ಹಿಡಿದಿದೆ. ಈ ಪಂದ್ಯಕ್ಕೆ ಭಾರತ ಕೆಲ ಅಚ್ಚರಿ ನಿರ್ಧಾರ ಕೈಗೊಂಡಿತ್ತು. ಇದರಲ್ಲಿ ಟೆಸ್ಟ್ ಕ್ರಿಕೆಟ್​ನ ನಂಬರ್ ಒನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈಬಿಟ್ಟಿದ್ದು ಕೂಡ ಒಂದು.

ರವಿಚಂದ್ರನ್ ಅಶ್ವಿನ್ ಭಾರತ ತಂಡ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದಾಗ ಅವರು ಫೈನಲ್​ನಲ್ಲೂ ಮುಖ್ಯ ಪಾತ್ರವಹಿಸಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಇವರಿಗೆ ಆಡುವ ಬಳಗದಲ್ಲೇ ಸ್ಥಾನ ಸಿಗಲಿಲ್ಲ. ಇದೀಗ ಈ ಬಗ್ಗೆ ಸ್ವತಃ ಆರ್. ಅಶ್ವಿನ್ ಮಾತನಾಡಿದ್ದಾರೆ.

ಡಬ್ಲ್ಯೂಟಿಸಿ ಫೈನಲ್ ಪಂದ್ಯದ ಆಡುವ 11ರ ಬಳಗದಲ್ಲಿ ನನಗೆ ಸ್ಥಾನ ಸಿಗುವುದಿಲ್ಲ ಎಂಬ ವಿಚಾರ ಎರಡು ದಿನಗಳ ಮೊದಲೇ ತಮಗೆ ತಿಳಿದಿತ್ತು ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ ನಡೆಸಿದ ಸಂದರ್ಶನದನ್ನು ಅಶ್ವಿನ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆಡುವ ಆಸೆ ಖಂಡಿತಾ ನನ್ನಲ್ಲೂ ಇತ್ತು. ಏಕೆಂದರೆ ತಂಡ ಫೈನಲ್‌ ತಲುಪಲು ನನ್ನ ಕೊಡುಗೆಯೂ ಇದೆ. ಕಳೆದ ಫೈನಲ್‌ನಲ್ಲೂ ನಾನು ಆಡಿ 4 ವಿಕೆಟ್‌ ಪಡೆದಿದ್ದೆ ಎಂದು ಅಶ್ವಿನ್ ಹೇಳಿದ್ದಾರೆ.

2018-19ರ ಬಳಿಕ ವಿದೇಶಿ ಪಿಚ್‌ಗಳಲ್ಲಿ ನನ್ನ ಬೌಲಿಂಗ್ ಪ್ರದರ್ಶನ ಉತ್ತಮವಾಗಿದೆ. ತಂಡಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದೇನೆ. ಆದರೆ, ನನ್ನನ್ನು ಆಯ್ಕೆ ಮಾಡಲಿಲ್ಲ. ನಾನು ಇದನ್ನು ನಾಯಕ ಅಥವಾ ತರಬೇತುದಾರನಾಗಿ ನೋಡುತ್ತಿದ್ದೇನೆ. ತಂಡದ ಪರವಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ – ಅಶ್ವಿನ್.

ಡಬ್ಲ್ಯೂಟಿಸಿ ಫೈನಲ್‌ನಲ್ಲಿ ನಾನು ಆಡಲು ಅರ್ಹ ಆಟಗಾರ ಎಂದು ಅವರಿಗೆ ಅನ್ನಿಸಿದ್ದನ್ನು ತಿಳಿದು ಬಹಳಾ ಸಂತಸವಾಯಿತು. ಆದರೆ, ದುರದೃಷ್ಟವಶಾತ್ ನನಗೆ ಅವಕಾಶ ಸಿಗಲಿಲ್ಲ. ನಾನು ಆಡುವ 11ರ ಬಳಗದಿಂದ ನಾನು ಹೊರಗುಳಿಯಲಿದ್ದೇನೆ ಎಂಬುದು ನನಗೆ 2 ದಿನ ಮೊದಲೇ ತಿಳಿದಿತ್ತು ಎಂದು ಅಶ್ವಿನ್ ಹೇಳಿದ್ದಾರೆ.

ಪ್ಲೇಯಿಂಗ್ ಇಲೆವೆನ್​ನಿಂದ ಹೊರಗಿದ್ದರೂ ನನ್ನ ಗುರಿ ತಂಡಕ್ಕೆ ಯಾವುದಾದರೂ ರೀತಿಯಲ್ಲಿ ನೆರವಾಗಿ ಟ್ರೋಫಿ ಗೆಲ್ಲುವಂತೆ ಮಾಡಬೇಕು ಎಂಬುದಾಗಿತ್ತು ಎಂಬುದು ಅಶ್ವಿನ್ ಮಾತಾಗಿತ್ತು.

ನಾವು ಕೊನೆಯ ಬಾರಿ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದಾಗ 2-2 ಅಂತರದಿಂದ ಡ್ರಾಗೊಂಡಿತ್ತು. ಆಗ ಇಂಗ್ಲೆಂಡ್‌ನಲ್ಲಿ 4 ವೇಗಿಗಳು ಮತ್ತು 1 ಸ್ಪಿನ್ನರ್ ಸಂಯೋಜನೆಯೊಂದಿಗ ಕಣಕ್ಕಿಳಿಯಲಾಗಿತ್ತು. ಅದೇ ಲೆಕ್ಕಾಚಾರದಲ್ಲಿ ಫೈನಲ್‌ನಲ್ಲಿಯೂ ಕಣಕ್ಕಿಳಿಯಲು ನಿರ್ಧರಿಸರಬಹುದು ಎಂದು ಆರ್ ಅಶ್ವಿನ್ ಹೇಳಿದ್ದಾರೆ.