ಪಕ್ಕದ್ಮನೆ ಯುವಕನ ಜೊತೆ ಮಾತಾಡ್ಬೇಡ ಎಂದ ಗಂಡನ ಗುಪ್ತಾಂಗಕ್ಕೆ ಬಿಸಿ ಎಣ್ಣೆ ಎರಚಿದ ಪತ್ನಿ

ಮಧ್ಯಪ್ರದೇಶ: ಅನೈತಿಕ ಸಂಬಂಧದ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳ ನಡೆಯೋದು ಕಾಮನ್‌. ಗಂಡ ಬೇರೊಬ್ಬಳ ಜೊತೆ ಸುತ್ತಾಡ್ತಿದ್ದಾನೆ ಅನ್ನೋ ಕಾರಣಕ್ಕೆ, ಹೆಂಡ್ತಿ ಇನ್ನೊಬ್ಬನ ಜೊತೆ ಮಾತನಾಡ್ತಾ ಇರ್ತಾಳೆ ಅನ್ನೋ ಕಾರಣಕ್ಕೆ ಪರಸ್ಪರ ಕಿತ್ತಾಡಿಕೊಳ್ತಾರೆ. ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತು ಎಲ್ಲಾ ಮನೆಯಲ್ಲೂ ನಡೆಯಲ್ಲ. ಕೆಲವೊಮ್ಮೆ ಇದು ಹಾದಿ-ಬೀದಿ ಗಲಾಟೆಗೆ, ಹಲ್ಲೆ, ಕೊಲೆಗೂ ಕಾರಣವಾಗೋದಿದೆ. ಹಾಗೆಯೇ ಇಲ್ಲೊದೆಡೆ ಗಂಡ-ಹೆಂಡತಿ ಜಗಳದ ಮಧ್ಯೆ, ಮಹಿಳೆ ತನ್ನ ಗಂಡನ ಗುಪ್ತಾಂಗಕ್ಕೆ ಬಿಸಿ ಎಣ್ಣೆ ಎರಚಿದ್ದಾಳೆ. ಇಂಥಹದ್ದೊಂದು ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪಕ್ಕದ್ಮನೆ ಯುವಕನೊಂದಿಗೆ ಮಾತಾಡ್ಬೇಡ ಎಂದ ಪತಿಯ ಗುಪ್ತಾಂಗಕ್ಕೆ  ಪತ್ನಿ ಬಿಸಿಎಣ್ಣೆ ಸುರಿದಿದ್ದಾಳೆ. ಯುವಕ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಅವರ ಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದನು. ಮಹಿಳೆ ದಿನಾ ಅವನೊಂದಿಗೆ ಮಾತನಾಡುತ್ತಿದ್ದಳು. ಈ ಬಗ್ಗೆ ಗಂಡ ಆಗಾಗ ಎಚ್ಚರಿಕೆ ಕೊಡುತ್ತಿದ್ದ. ಆದ್ರೆ ಮಹಿಳೆ ಗಂಡನ ಸಲಹೆಗೆ ಗಮನ ಕೊಡುತ್ತಿರಲ್ಲಿಲ್ಲ. ಆದರೂ ಪತಿ ಆಕೆಗೆ ಬೈಯುವುದನ್ನು ಮುಂದುವರಿಸಿದ್ದ. ಗಂಡ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರಿಂದ ಬೇಸರಗೊಂಡ ಪತ್ನಿ ಮಧ್ಯರಾತ್ರಿಯಲ್ಲಿ ತನ್ನ ಗಂಡನ ಜನನಾಂಗದ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ. 

ಪಕ್ಕದ ಮನೆಯ ಯುವಕನೊಂದಿಗೆ ಮೊಬೈಲ್​ನಲ್ಲಿ ಮಾತನಾಡಬೇಡ ಎಂದು ಹೇಳಿದ್ದಕ್ಕೆ ಕುಪಿತಗೊಂಡ ಪತ್ನಿ, ರಾತ್ರಿ ಮಲಗಿದ್ದಾಗ ಪತಿಯ ಗುಪ್ತಾಂಗಕ್ಕೆ ಬಿಸಿ ಎಣ್ಣೆ ಸುರಿದಿದ್ದಾಳೆ. ಗ್ವಾಲಿಯರ್​ನ ಕಂಪು ಪೊಲೀಸ್ ಠಾಣೆ ವ್ಯಾಪ್ತಿಯ ಮಾಧವಿ ನಗರದ ನಿವಾಸಿ ಸುನೀಲ್ ತೀವ್ರವಾಗಿ ಗಾಯಗೊಂಡಿದ್ದಾರೆ. ಸುನೀಲ್​ ಕುಮಾರ್​ ಧಾಕಡ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇವರ ಪತ್ನಿ ಭಾವನಾ. ಇಬ್ಬರೂ ಮಾಧವಿ ನಗರದಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. 

ಕೆಲವು ದಿನಗಳ ಹಿಂದೆ ಪಕ್ಕದ ಮನೆ ಮಹಿಳೆಯೊಬ್ಬರು ಸುನೀಲ್ ಜೊತೆ, ನೀವು ಕೆಲಸಕ್ಕೆ ಹೋದ ನಂತರ ನಿಮ್ಮ ಪತ್ನಿ ತನ್ನ ಪತಿಯೊಂದಿಗೆ ಮಾತನಾಡುತ್ತಾಳೆ ಎಂದು ದೂರು ನೀಡಿದ್ದರು. ಈ ಬಗ್ಗೆ ಸುನೀಲ್​​ ಪತ್ನಿಯನ್ನು ಕರೆದು ವಿಚಾರಿಸಿದ್ದಾಗಲೂ ಆಕೆ, ನಾನು ಮಾತನಾಡುತ್ತಿಲ್ಲ ಎಂದೇ ಹೇಳಿದ್ದರು. ಇತ್ತೀಚಿಗೆ ಸುನೀಲ್ ಮನೆಗೆ ಬಂದಾಗ ಭಾವನಾ ಯುವಕನೊಂದಿಗೆ ಮತ್ತೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪತ್ನಿಗೆ ಮಾತನಾಡದಂತೆ ಸುನೀಲ್ ಎಚ್ಚರಿಕೆ ಕೊಟ್ಟಿದ್ದರು.​ ಆಕೆ ಮತ್ತೆ ಮಾತನಾಡಲು ಶುರು ಮಾಡಿದ್ದಾಗ ಬಾರಿ ಜಗಳ ನಡೆದಿದೆ. ಇದರಿಂದ ಬೇಸತ್ತ ಸುನೀಲ್ ಭಾವನಾಳ ಮೊಬೈಲ್ ಕಸಿದುಕೊಂಡಿದ್ದರು. 

ಇದಾದ ಬಳಿಕ ರಾತ್ರಿ 2 ಗಂಟೆ ಸುಮಾರಿಗೆ ಪತಿ ಗಾಢ ನಿದ್ದೆಗೆ ಜಾರಿದ್ದರು. ಇದನ್ನೇ ಕಾದು ಕುಳಿತಿದ್ದ ಭಾವನಾ ಎದ್ದು ಅಡುಗೆ ಮನೆಯಲ್ಲಿ ಎಣ್ಣೆ ಕಾಯಿಸಿದ್ದಾರೆ. ಬಿಸಿ ಬಿಸಿ ಕಾದ ಎಣ್ಣೆ ತಂದು ಪತಿಯ ಗುಪ್ತಾಂಗದ ಮೇಲೆ ಸುರಿದಿದ್ದಾರೆ. ಬಿಸಿ ಎಣ್ಣೆ ದೇಹದ ಮೇಲೆ ಬಿದ್ದು ಸುನೀಲ್ ದೇಹದ ಶೇ. 70ರಷ್ಟು ಭಾಗ ಸುಟ್ಟುಹೋಗಿದೆ. ಘಟನೆ ನಡೆದ ಬಳಿಕ ಪತ್ನಿ ಮನೆಯಿಂದ ಓಡಿ ಹೋಗಿದ್ದಾಳೆ. 

ನೋವಿನಿಂದ ನರಳುತ್ತಿದ್ದ ಸುನೀಲ್ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿಕೊಂಡಿದ್ದಾರೆ. ಧ್ವನಿ ಕೇಳಿದ ಸುತ್ತಮುತ್ತಲಿನವರು ಸ್ಥಳಕ್ಕೆ ಆಗಮಿಸಿ ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪತಿ ಹೇಳಿಕೆಯ ಮೇಲೆ ಪತ್ನಿ ವಿರುದ್ದ ಪ್ರಕರಣ ಕೂಡ ದಾಖಲಾಗಿದೆ. ಆರೋಪಿ ಪತ್ನಿಪತ್ತೆಗೆ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.