ದಾಂಡೇಲಿ :ಸಾರ್ವಜನಿಕ ಆಸ್ಪತ್ರೆಯಲ್ಲಿ ಫಾರ್ಮಸಿ ಅಧಿಕಾರಿ ಯೋಗೇಂದ್ರ ಪಡುಕೋಣೆಯವರಿಗೆ ಬೀಳ್ಕೊಡುಗೆ ಸಮಾರಂಭ

ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 20 ವರ್ಷಗಳಿಂದ ಫಾರ್ಮಸಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಹಿರಿಯ ಫಾರ್ಮಸಿ ಅಧಿಕಾರಿಯಾಗಿ ಪದೋನ್ನತಿಗೊಂಡು ಧಾರವಾಡದ ಸಿವಿಲ್ ಆಸ್ಪತ್ರೆಗೆ ವರ್ಗಾವಣೆಗೊಂಡ ಯೋಗೇಂದ್ರ ಪಡುಕೋಣೆಯವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಇಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿತ್ತು.

ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪರವಾಗಿ ಯೋಗೇಂದ್ರ ಪಡುಕೋಣೆಯವರನ್ನು ಸನ್ಮಾನಿಸಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಅವರು ಯೋಗೇಂದ್ರ ಪಡುಕೋಣೆಯವರ ಆದರ್ಶ ಮತ್ತು ಜನಸ್ನೇಹಿ ನಡವಳಿಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಪಾಮಾಣಿಕತೆ ಮತ್ತು ಅವರ ಕರ್ತವ್ಯ ಬದ್ಧತೆ ಅನುಕರಣೀಯ ಎಂದು ಹೇಳಿ ಅವರ ಮುಂದಿನ ಜೀವನಕ್ಕೆ ಶುಭವನ್ನು ಕೋರಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಯೋಗೇಂದ್ರ ಪಡುಕೋಣೆಯವರು ನೀವು ಮಾಡಿದ ಪ್ರೀತಿ ವಾತ್ಸಲ್ಯದ ಸನ್ಮಾನ ನನಗೆ ಜನ್ಮ ನೀಡಿದ ತಂದೆ, ತಾಯಿಗೆ ಸಮರ್ಪಣೆ. ನನ್ನ ಕುಟುಂಬಸ್ಥರು ನೀಡಿದ ಸಹಕಾರ, ಇಲ್ಲಿಯ ವೈದ್ಯರಿಂದ ಹಿಡಿದು ಪ್ರತಿಯೊಬ್ಬ ಸಿಬ್ಬಂದಿಯು ನೀಡಿದ ಪ್ರೀತಿ, ಪ್ರೋತ್ಸಾಹ ಮತ್ತು ಸಹಕಾರಕ್ಕೆ ಸದಾ ಋಣಿಯಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು, ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.