ಬೆಂಗಳೂರು: ಹಲವು ಪೊಲೀಸರಿಗೆ ವಂಚಿಸಿದ್ದ ನಕಲಿ ಐಪಿಎಸ್ ಅರ್ಜುನ್ ಅರೆಸ್ಟ್

ತಾನು ಎಸ್​ಪಿ ಅಂತ ಹೇಳಿಕೊಂಡು ವಂಚನೆಗಿಳಿದಿದ್ದ ನಕಲಿ ಐಪಿಎಸ್​ ಅಧಿಕಾರಿಯನ್ನು ಬೆಂಗಳೂರಿನ ಕಾಟನ್ ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ವರ್ಗಾವಣೆ ದಂಧೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹಲವು ಪೊಲೀಸರಿಗೆ ವಂಚನೆಮಾಡಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನುಬೆಂಗಳೂರಿನ ಕಾಟನ್ ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಭುವನ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ತಾನು ಎಸ್​ಪಿ ಅಂತ ಹೇಳಿಕೊಂಡು ವಂಚನೆಗಿಳಿದಿದ್ದ ಈತ ಸದ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ವರ್ಗಾವಣೆ ದಂಧೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಭುವನ್ ಕುಮಾರ್ ತನ್ನ ಹೆಸರನ್ನು ಅರ್ಜುನ್ ಅಂತ ಬದಲಿಸಿ ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಎಲ್ಲರಿಗೂ ಪರಿಚಯ ಮಾಡಿಕೊಂಡಿದ್ದನು. ಅಲ್ಲದೆ, ತನ್ನ ಸಂಬಂಧಿ ಹಿರಿಯ ಐಪಿಎಸ್ ಅಧಿಕಾರಿ ಇದ್ದಾರೆ ಅಂತ ನಂಬಿಸಿದ್ದು, ತಾನು ಕೆಲವೇ ದಿನಗಳಲ್ಲಿ ಎಕ್ಸಿಕ್ಯುಟಿವ್ ಆಗಿ ಬರುತ್ತೇನೆ ಅಂತ ಹೇಳಿಕೊಂಡಿದ್ದನು.

ಹೀಗೆ ನಕಲಿ ಐಪಿಎಸ್ ಮಾತಿಗೆ ಮರುಳಾದ ಕೆಲವು ಪೊಲೀಸರು ಪೋಸ್ಟಿಂಗ್ ಮಾಡಿಕೊಡಲು ಭುವನ್​ಗೆ ಹಣ ನೀಡಿದ್ದಾರೆ. ಹೀಗೆ ಸುಮಾರು ಒಂದೂವರೆ ಕೋಟಿಗೂ ಅಧಿಕ ಹಣವನ್ನು ಪಡೆದಿದ್ದಾನೆ. ಹಣ ಪಡೆದ ಬಳಿಕ ಪೋಸ್ಟಿಂಗ್ ವಿಚಾರ ಕೇಳಿದಾಗ ಸಬೂಬು ಹೇಳುತ್ತಾ ಇದ್ದನು. ಇದೇ ವೇಳೆ ಈತನ ಬಗ್ಗೆ ಕಾಟನ್ ಪೇಟೆ ಪೊಲೀಸರಿಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಹುಡುಕಾಟಕ್ಕೆ ಮುಂದಾಗಿದ್ದಾರೆ.