ರೈಲು ಬರುತ್ತಿದ್ದಂತೆ ಹಳಿಗೆ ತಲೆಕೊಟ್ಟ ವ್ಯಕ್ತಿ – ಓಡಿ ಹೋಗಿ ರಕ್ಷಿಸಿದ ಮಹಿಳಾ ಕಾನ್‌ಸ್ಟೇಬಲ್!

ಕೋಲ್ಕತ್ತಾ: ರೈಲು ಬರುತ್ತಿರುವುದನ್ನು ಕಂಡ ತಕ್ಷಣ ಹೋಗಿ ಹಳಿಗೆ ತಲೆ ಕೊಟ್ಟ ವ್ಯಕ್ತಿಯನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ವ್ಯಕ್ತಿಯನ್ನು ಸಿಬ್ಬಂದಿ ರಕ್ಷಿಸುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ರಕ್ಷಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಗಳನ್ನು ಆರ್‌ಪಿಎಫ್ ಇಂಡಿಯಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. 

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಹಠಾತ್ತನೆ ಹಳಿ ಮೇಲೆ ತಲೆ ಕೊಟ್ಟು ಮಲಗಿದ್ದಾನೆ. ಇದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ತಕ್ಷಣ ಟ್ರ್ಯಾಕ್‌ ಬಳಿ ತೆರಳಿ ವ್ಯಕ್ತಿಯನ್ನು ಎಳೆದುಕೊಂಡಿದ್ದಾರೆ. ಈ ವೇಳೆ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನಿಬ್ಬರು ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ. ಈ ವೇಳೆ ರೈಲೊಂದು ಪಾಸ್‌ ಆಗುತ್ತದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ವೀಡಿಯೋವನ್ನು ಪೋಸ್ಟ್‌ ಮಾಡಿರುವ ಆರ್‌ಪಿಎಫ್‌ ಇಂಡಿಯಾ, “ಪೂರ್ವ ಮೇದಿನಿಪುರ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿತ್ತು. ಈ ವೇಳೆ ಹಳಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ತಕ್ಷಣ ಮಹಿಳಾ ಕಾನ್‌ಸ್ಟೇಬಲ್‌ ಕೆ.ಸುಮತಿ ಆತನನ್ನು ರಕ್ಷಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಅವರ ಬದ್ಧತೆಗೆ ಸೆಲ್ಯೂಟ್‌” ಎಂದು ಬರೆದುಕೊಂಡಿದೆ. 

ವ್ಯಕ್ತಿಯನ್ನು ರಕ್ಷಿಸಿ ಆರ್‌ಪಿಎಫ್‌ ಸಿಬ್ಬಂದಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಬದ್ಧತೆಯಿಂದ ಕೆಲಸ ಮಾಡಿದ್ದಾರೆ ಅಭಿನಂದನೆಗಳು ಎಂದು ಮತ್ತೊಬ್ಬರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.