ಮನೆಯಲ್ಲಿ ಮಲಗಿದ್ದ ಗಂಡ- ಹೆಂಡತಿಗೆ ಕಚ್ಚಿದ ಹಾವು: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ

ಬೆಳಗಾವಿ (ಜೂ.11): ರಾತ್ರಿ ವೇಳೆ ಮನೆಯಲ್ಲಿ ಗಂಡ-ಹೆಂಡತಿ ಹಾಗೂ ಮಕ್ಕಳು ಒಂದೇ ಸಾಲಿನಲ್ಲಿ ಮಲಗಿದ್ದಾಗ ಮನೆಯೊಳಗೆ ಹೊಕ್ಕ ವಿಷಸರ್ಪ (ಕೊಳಕುಮಂಡಲ ಹಾವು) ಗಂಡ-ಹೆಂಡತಿ ಇಬ್ಬರಿಗೂ ಕಚ್ಚಿದೆ. ಕೂಡಲೇ ಎಚ್ಚೆತ್ತುಕೊಂಡು ರಾತ್ರೋ ರಾತ್ರಿ ಕುಟುಂಬ ಸದಸ್ಯರು ಆಸ್ಪತ್ರೆಗೆ ಹೋಗಿ ದಾಖಲಾದರೂ ಮನೆ ಯಜಮಾನ ಪತಿ ಬದುಕುಳಿಯಲಿಲ್ಲ. ಇನ್ನು ಪತ್ನಿ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಬೆಳಗಾವಿಯ ವಡಗಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಮೂಲದ ದಂಪತಿ ಬೆಳಗಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ವಾಚ್‌ಮನ್ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ, ನಿನ್ನೆ ರಾತ್ರಿ ವೇಳೆ ಮಕ್ಕಳೊಂದಿಗೆ ಮಲಗಿದ್ದಾಗ ಪತಿ-ಪತ್ನಿಗೆ ಹಾವು ಕಚ್ಚಿದೆ. ಇದರಿಂದ ವಿಷ ತೀವ್ರ ಏರಿಕೆಯಾಗಿದ್ದು, ಪತಿ ಸಾವನ್ನಪ್ಪಿದ್ದು, ಪತ್ನಿ ಬದುಕಿನ‌ ಮಧ್ಯೆ ಪತ್ನಿ ಹೋರಾಟ ಮಾಡುತ್ತಿದ್ದಾರೆ. 

ಭಯಭೀತರಾದ ಮೂವರು ಮಕ್ಕಳು: ರಾತ್ರಿ ಊಟ ಮಾಡಿ ಮಕ್ಕಳೊಂದಿಗೆ ಮಲಗಿದ್ದ ದಂಪತಿಗೆ ಹಾವು ಕಚ್ಚಿದೆ. ಸ್ಥಳೀಯರ ನೆರವಿನಿಂದ ಜಿಲ್ಲಾಸ್ಪತ್ರೆಗೆ ದಂಪತಿಯನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸಿದ್ದಪ್ಪ ಚಿವಟಗುಂಡಿ(35) ಸಾವನ್ನಪ್ಪಿದ್ದಾರೆ. ಇನ್ನು ನಾಗವ್ವ ಚಿವಟಗುಂಡಿ(28) ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಇನ್ನು ಮೂವರ ಮಕ್ಕಳು ಭಯಭೀತರಾಗಿದ್ದು, ಮುಂದಿನ ಜೀವನ ಹೇಗೆಂಬ ರಾತ್ರಿ ಊಟ ಮಾಡಿ  ತಮ್ಮ ಮೂವರು ಮಕ್ಕಳೊಂದಿಗೆ ನಿದ್ದೆಗೆ ಜಾರಿದ್ದ ದಂಪತಿಗೆ ಹಾವು ಯಮಸ್ವರೂಪಿಯಾಗಿ ಬಂದಿದ್ದಾನೆ.

ಮಲಗಿದ್ದ ಜಾಗದಲ್ಲಿ ಒದ್ದಾಡುತ್ತಿದ್ದ ತಂದೆ-ತಾಯಿ: ಇನ್ನು ಮನೆಯಲ್ಲಿ ಮಲಗಿದ್ದ ವೇಳೆ ಹಾಸಿಗೆಯಲ್ಲಿಯೇ ತಂದೆ-ತಾಯಿ ಒದ್ದಾಡುವುದನ್ನು ನೋಡಿದ ಮಕ್ಕಳು ಕೂಡಲೇ ಎದ್ದು, ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ನಂತರ, ಪಕ್ಕದ ಮನೆಯವರು ಬಂದು ಹಾಸಿಗೆಯನ್ನು ಎತ್ತಿ ನೋಡಿದಾಗ ತಂದೆ- ತಾಯಿ ಮಲಗಿದ್ದ ಜಾಗದಲ್ಲಿ ವಿಷಕಾರಿ ಹಾವಿರುವುದು ಕಂಡುಬಂದಿದೆ. ಇನ್ನು ಹಾವು ಕಚ್ಚಿದವರನ್ನು ಸಾಗಿಸಲು ಯಾವುದೇ ವಾಹನಗಳು ಇಲ್ಲದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಕೆಲ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್‌ ಮೂಲಕ ಸಿದ್ದಪ್ಪ ಹಾಗೂ ನಾಗವ್ವ ಬೀಮ್ಸ್ ಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಪತಿ ಸಿದ್ದಪ್ಪ ಸಾವನ್ನಪ್ಪಿದ್ದನು. ಈ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.