ಗಡಿ ಚೆಕ್ ಪೋಸ್ಟ್ ಗಳಲ್ಲಿ ಭದ್ರತೆ ಹೆಚ್ಚಿಸಿ: ಜನಶಕ್ತಿ ವೇದಿಕೆ ಆಗ್ರಹ

ಕಾರವಾರ: ಗಡಿ ಚೆಕ್‌ಪೋಸ್ಟ್ಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಆಗ್ರಹಿಸಿ ಜನಶಕ್ತಿ ವೇದಿಕೆಯು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ಸೋಮವಾರ ಕಂಟೇನರ್ ಲಾರಿಯ ಮೂಲಕ ಸುಮಾರು 26 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನ ಸಾಗಿಸುತ್ತಿದ್ದ ವೇಳೆ ಪೊಲೀಸರ ವಿಶೇಷ ತಂಡ ಆರೋಪಿಯನ್ನ ಮಾಲು ಸಮೇತ ಬಂಧಿಸಿತ್ತು. ಗೋವಾ- ಕರ್ನಾಟಕ ಗಡಿ ಭಾಗದ ಮಾಜಾಳಿಯಲ್ಲಿ ಅಬಕಾರಿ ಚೆಕ್‌ಪೋಸ್ಟ್ ಇದ್ದು, ತದನಂತರ ಕಾರವಾರ ನಗರಕ್ಕೆ ಪ್ರವೇಶಿಸುವ ಮುನ್ನ ಸದಾಶಿವಗಡ ಬಳಿ ಪೊಲೀಸ್ ಔಟ್‌ಪೋಸ್ಟ್ ನಿರ್ಮಿಸಲಾಗಿದೆ. ಕಾರವಾರ ನಗರದಿಂದ ಹೊರಬೀಳುವ ಲಂಡನ್ ಬ್ರಿಡ್ಜ್ ಬಳಿಯೂ ಪೊಲೀಸ್ ಔಟ್‌ಪೋಸ್ಟ್ ಇದೆ. ಆದರೆ ಈ ಎಲ್ಲಾ ಚೆಕ್‌ಪೋಸ್ಟ್ಗಳನ್ನೂ ದಾಟಿ ಕಾರವಾರ ನಗರದ ಹೊರಭಾಗವಾದ ಬಿಣಗಾದಲ್ಲಿ ಮದ್ಯ ಸಾಗಿಸುವ ವೇಳೆ ಪೊಲೀಸರಿಗೆ ಆರೋಪಿ ಸೆರೆ ಸಿಕ್ಕಿದ್ದಾನೆ. ಇದರಿಂದಾಗಿ ಈ ಪ್ರಕರಣದಲ್ಲಿ ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳ, ಚೆಕ್‌ಪೋಸ್ಟ್ ತಂಡದ ವೈಫಲ್ಯ ಎದ್ದು ತೋರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಔಷಧಿ ಎಂಬ ಕಾರಣಕ್ಕೆ ಮಾಜಾಳಿ ಗಡಿ ಚೆಕ್‌ಪೋಸ್ಟ್ನಲ್ಲಿ ಪರಿಶೀಲಿಸದೇ ಕಂಟೇನರ್ ಲಾರಿಯನ್ನು ಮುಂದಕ್ಕೆ ಬಿಟ್ಟಿದ್ದಾರೆನ್ನಲಾಗಿದೆ. ಔಷಧಿಯ ನೆಪದಲ್ಲಿ ಮುಂದೊAದು ದಿನ ಕಾರವಾರ ನಗರಕ್ಕೆ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಕೂಡ ದುಷ್ಕರ್ಮಿಗಳು ತಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಕಾರವಾರ ಸೇರಿದಂತೆ ರಾಜ್ಯದ ಗಡಿಗಳಲ್ಲಿ ಭದ್ರತೆಯನ್ನ ಹೆಚ್ಚಿಸಬೇಕು. ಜೊತೆಗೆ ಸಿಐಎಸ್‌ಎಫ್ ಅಥವಾ ಇನ್ಯಾವುದೇ ಭದ್ರತಾ ಪಡೆಗಳ ಸಿಬ್ಬಂದಿಯನ್ನ ನಿಯೋಜಿಸಬೇಕಿದೆ. ಈಗಿರುವ ಚೆಕ್‌ಪೋಸ್ಟ್ ತಂಡಗಳಿಗೆ ವಾಹನಗಳ ಪರಿಶೀಲನೆಗೆ ಅತ್ಯಾಧುನಿಕ ಪರಿಶೀಲನಾ ಸಾಧನಗಳನ್ನ ಒದಗಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮನವಿ ಸ್ವೀಕರಿಸಿದರು. ಮನವಿ ಸಲ್ಲಿಸುವ ವೇಳೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಪ್ರಮುಖರಾದ ರಾಮ ನಾಯ್ಕ, ಬಾಬು ಶೇಖ್, ಸುರೇಶ್ ನಾಯ್ಕ, ಕಾಶೀನಾಥ ನಾಯ್ಕ, ಸಂದೇಶ್ ನಾಯ್ಕ, ಸಿ.ಎನ್.ನಾಯ್ಕ, ಸೂರಜ್ ಕುರುಮಕರ್, ರೋಹಿದಾಸ್ ಬಾನಾವಳಿ ಹಾಜರಿದ್ದರು.