ಒಡಿಶಾ  ರೈಲು ದುರಂತಕ್ಕೆ ನಿರ್ಲಕ್ಷ್ಯ ಕಾರಣವೇ ಆಥವಾ ತಾಂತ್ರಿಕ ದೋಷವೇ?

ಭುವನೇಶ್ವರ: ಒಡಿಶಾದಲ್ಲಿ ಸಂಭವಿಸಿದ, ಎರಡು ದಶಕಗಳಲ್ಲೇ ಅತ್ಯಂತ ಭೀಕರವಾದದ್ದು ಎನ್ನಲಾದ ರೈಲು ಅಪಘಾತದಲ್ಲಿ ಕನಿಷ್ಠ 261 ಜನರು ಸಾವನ್ನಪ್ಪಿದ್ದಾರೆ. ಅಪಘಾತವು ತಾಂತ್ರಿಕ ದೋಷದಿಂದ ಸಂಭವಿಸಿದೆಯೇ ಅಥವಾ ನಿರ್ಲಕ್ಷ್ಯದ ಪರಿಣಾಮವೇ ಎಂಬ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಒಡಿಶಾದ ಬಾಲಸೋರ್‌ನಲ್ಲಿ ಅಪಘಾತ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದು, ಅಪಘಾತದ ಬಗ್ಗೆ ವಿಸ್ತೃತವಾದ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಘಟನೆ ಬಗ್ಗೆ ವಿಸ್ತೃತವಾದ ಉನ್ನತ ಮಟ್ಟದ ವಿಚಾರಣೆಯನ್ನು ನಡೆಸಲಾಗುವುದು ಮತ್ತು ರೈಲು ಸುರಕ್ಷತಾ ಆಯುಕ್ತರು ಸ್ವತಂತ್ರ ತನಿಖೆಯನ್ನು ಮಾಡಲಿದ್ದಾರೆ ಎಂದು ವೈಷ್ಣವ್ ಹೇಳಿದ್ದಾರೆ.

ಪ್ರಾಥಮಿಕ ತನಿಖಾ ವರದಿಗಳು ಹೇಳಿದ್ದೇನು?

ರೈಲ್ವೆಯ ಸಿಗ್ನಲಿಂಗ್ ಕಂಟ್ರೋಲ್ ರೂಮ್‌ನ ಪ್ರಾಥಮಿಕ ವರದಿಗಳ ಪ್ರಕಾರ, ದುರಂತ ಸಂಭವಿಸುವ ಕೆಲವು ನಿಮಿಷಗಳ ಮೊದಲು ರೈಲು ತಪ್ಪಾದ ಟ್ರ್ಯಾಕ್​​ನಲ್ಲಿ ಸಂಚರಿಸಿತ್ತು. ನಿರ್ಕ್ಷ್ಯದ ಪರಿಣಾಮವಾಗಿ ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ.

ಈ ಮಧ್ಯೆ, ಗಂಟೆಗೆ ಸುಮಾರು 127 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಮುಖ್ಯ ಮಾರ್ಗದಲ್ಲೇ ಹಳಿ ತಪ್ಪಿದೆ ಎಂದು ರೈಲ್ವೆ ಸಚಿವರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ, ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ, ಹೌರಾಕ್ಕೆ ಹೋಗುತ್ತಿದ್ದ ಯಶವಂತನಗರ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ.

ಅಪಘಾತ ಹೇಗೆ ಸಂಭವಿಸಿತು ಮತ್ತು ಯಾವ ಕಾರಣದಿಂದ ಸಂಭವಿಸಿತು ಎಂಬುದು ವಿವರವಾದ ತನಿಖೆಯ ನಂತರ ತಿಳಿದುಬರಬೇಕಿದೆ. ಆದರೆ, ಮೇಲ್ನೋಟಕ್ಕೆ ಇದು ನಿರ್ಲಕ್ಷ್ಯದಿಂದಾಗಿದೆ ಎಂಬುದು ಕಂಡುಬಂದಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಹಿಂದೂಸ್ತಾನ್​ ಟೈಮ್ಸ್​​’ಗೆ ತಿಳಿಸಿದ್ದಾರೆ.

ಈಸ್ಟ್ ಕೋಸ್ಟ್ ರೈಲ್ವೆ ವಲಯದ ನಿವೃತ್ತ ಅಧಿಕಾರಿಯೊಬ್ಬರು, ತಾಂತ್ರಿಕ ದೋಷಗಳು ಮತ್ತು ಸಿಗ್ನಲ್ ಸಮಸ್ಯೆಗಳಿಂದ ಅಪಘಾತ ಸಂಭವಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.