ಬಡವರಿಗೆ ಅಕ್ಕಿ ಕೊಟ್ಟರೆ ತಪ್ಪಲ್ಲ, ಅವರು ಸೋಮಾರಿ ಆಗಲ್ಲ’; ಕಾಂಗ್ರೆಸ್ ಯೋಜನೆ ಬಗ್ಗೆ ಧನಂಜಯ್ ಮಾತು

ನಟ ಧನಂಜಯ್ಅವರು ಸದಾ ವಿವಾದಗಳಿಂದ ದೂರ ಇರೋಕೆ ಬಯಸುತ್ತಾರೆ. ಅವರು ಸಿನಿಮಾ ಕೆಲಸಗಳ ಜೊತೆ ಹಲವು ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದರೆ ಆ ರೀತಿಯ ಕೆಲಸಗಳನ್ನು ಮಾಡಲು ಧನಂಜಯ್ ಹೆಚ್ಚು ಆದ್ಯತೆ ನೀಡುತ್ತಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದಲ್ಲಿನ ಶಾಲೆ ಪ್ರಾರಂಭೋತ್ಸವಕ್ಕೆ ನಟ ಡಾಲಿ ಧನಂಜಯ್ ಅವರು ಇಂದು (ಮೇ 31) ಚಾಲನೆ ನೀಡಿದ್ದಾರೆ. ಆ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿ ಹಲವು ವಿಚಾರ ಹಂಚಿಕೊಂಡಿದ್ದಾರೆ.

ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿವೆ. ಚಲುವರಸನಕೊಪ್ಪಲು ಗ್ರಾಮದ ಶಾಲೆಯನ್ನು ಮಾದರಿ ಶಾಲೆಯಾಗಿ ಬದಲಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟೇಪ್ ಕತ್ತರಿಸಿ ಶಾಲೆಗೆ ಚಾಲನೆ ನೀಡಿದ್ದಾರೆ ಡಾಲಿ. ಅವರು ಒಂದು ರೌಂಡ್ ಹಾಕಿ ಶಾಲಾ ಕಟ್ಟಡ ವೀಕ್ಷಿಸಿದ್ದಾರೆ.
ಉಚಿತ ಅಕ್ಕಿ ಬಗ್ಗೆ ಮಾತನಾಡಿದ ಧನಂಜಯ್


ಧನಂಜಯ್ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದಿಂದ ಉಚಿತವಾಗಿ 10 ಕೆಜಿ ಅಕ್ಕಿ ನೀಡುವ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ‘ಯಾವುದೇ ಪಕ್ಷದ ಪರವಾಗಿ ಅಥವಾ ವಿರೋಧವಾಗಿ ನಾನು ಮಾತನಾಡುವುದಿಲ್ಲ. ಸಾಮಾನ್ಯ ಮನುಷ್ಯನಾಗಿ ನಾನು‌ ಹೇಳ್ತೀನಿ. ಹಸಿವು ನೀಗಿಸಲು ಉಚಿತವಾಗಿ ಅಕ್ಕಿ ಕೊಟ್ಟರೆ ತಪ್ಪಾಗಿ ಕಾಣಲ್ಲ. ಅಕ್ಕಿ ಕೊಟ್ಟರೆ ಜನರು ಸೋಮಾರಿ ಆಗ್ತಾರೆ ಅನ್ನೋದು ತಪ್ಪು. ಅಕ್ಕಿ ಕೊಟ್ಟರೆ ಹಸಿವು ನೀಗುತ್ತದೆ. ಇತರೆ ಖರ್ಚಿಗೆ ಬಡವರು ದುಡಿಯುತ್ತಾರೆ. ಬಡವರಿಗೆ ಅಕ್ಕಿ ಕೊಟ್ಟರೆ ಸೋಮಾರಿ ಆಗ್ತಾರೆ ಅನ್ನೋದು ತಪ್ಪು’ ಎಂದು ಧನಂಜಯ್ ಹೇಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ‌ ಉತ್ತಮ ಶಿಕ್ಷಣ ಸಿಗುತ್ತಿದೆ. ಒಂದು ಕ್ಷೇತ್ರದಲ್ಲಿ ಎಲ್ಲವೂ ಸರಿ ಇರಲ್ಲ. ನ್ಯೂನ್ಯತೆಗಳನ್ನು ಸರಿಮಾಡಿಕೊಂಡು ಉತ್ತಮ ಶಿಕ್ಷಣ ಕೊಡಬೇಕು’ ಎಂದು ಧನಂಜಯ್ ಅಭಿಪ್ರಾಯಪಟ್ಟರು.
‘ಹೊಯ್ಸಳ’ದಿಂದ ಯಶಸ್ಸು
ಧನಂಜಯ್ ನಟನೆಯ ‘ಗುರುದೇವ್ ಹೊಯ್ಸಳ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಆಗಿ ಧನಂಜಯ್ ಗಮನ ಸೆಳೆದರು. ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ‘ಕೆಆರ್ಜಿ ಸ್ಟುಡಿಯೋ’ ಮೂಲಕ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ