ಧಾರವಾಡದಲ್ಲಿ ಕೊಲೆಯಾದ ಮುಂಡಗೋಡ ಪಟ್ಟಣದ ದೇಶಪಾಂಡೆ ನಗರದ ಯುವಕ


ಧಾರವಾಡದ ಕಮಲಾಪುರದ ಹಾತರಕಿ ಪ್ಲಾಟ್ ಬಳಿ ಘಟನೆ ನಡೆದಿದ್ದು ಗಣೇಶ ಕಮ್ಮಾರ(ಸಾಳುಂಕೆ)(24) ಹತ್ಯೆಗೀಡಾದ ಯುವಕ. ಕೊಲೆ ಮಾಡಲು ತನ್ನ ಸಂಗಡಿಗರ ಜೊತೆ ಹೋದ ಈತನೇ ಕೊಲೆಯಾಗಿದ್ದಾನೆ.
ನಡೆದ ಘಟನೆ: ಧಾರವಾಡದ ಮಹಮ್ಮದ್‌ಸಾಬ್ ಕುಡಚಿ ಮತ್ತು ಅರ್ಬಾಜ್ ಫ್ರುಟ್ ಇರ್ಫಾನ್ ಇಬ್ಬರ ನಡುವೆ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಹಣದ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿತ್ತು. ಆರೋಪಿ ಅರ್ಬಾಜ್ ಇದೇ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಗಣೇಶ ಕಮ್ಮಾರ ಸೇರಿ 5ಜನರ ತಂಡದೊಂದಿಗೆ ಮಹಮ್ಮದ್‌ಸಾಬ್ ಕುಡಚಿ ತಮ್ಮ ಮನೆ ಬಳಿ ಆತ್ಮೀಯರೊಂದಿಗೆ ಮಾತನಾಡುತ್ತಾ ಕುಳಿತಾಗ ಮಾರಕಾಸ್ತ್ರಗಳಿಂದ ಮಹಮ್ಮದ್‌ಸಾಬ್ ಮೇಲೆ ದಾಳಿ ನಡೆಸಿ ಬರ್ಬರ ಹತ್ಯೆ ಗೈದಿದ್ದಾರೆ. ದೂರುದಾರ ತಮ್ಮನಾದ ಹಜರತ್ ಅಲಿ ಮೇಲೆಯೂ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಯುತ್ತಿದ್ದಾಗ 5 ಜನರ ಗುಂಪಿನವನೇ ಆದ ಪಟ್ಟಣದ ಯುವಕ ಗಣೇಶ ಕಮ್ಮಾರನಿಗೆ ಮಾರಕಾಸ್ತ್ರದಿಂದ ಹೊಡೆತ ಬಿದ್ದು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.