ಅಕ್ರಮವಾಗಿ ಸಾಗುವಾನಿ ಕಟ್ಟಿಗೆ ಸಂಗ್ರಹ: ಅರಣ್ಯ ಅಧಿಕಾರಿಗಳಿಂದ ದಾಳಿ.! ಆರೋಪಿ ಎಸ್ಕೇಪ್.!

ಮುಂಡಗೋಡ: ಅಕ್ರಮವಾಗಿ ಸಂಗ್ರಹಿಸಿದ್ದ ಸಾಗುವಾನಿ ಕಟ್ಟಿಗೆ ಹಾಗೂ ಪರಿಕರಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ತಾಲೂಕಿನ ಕೊಡಂಬಿ ಹಳ್ಳದಮನೆ ಗ್ರಾಮದಲ್ಲಿ ಜರುಗಿದೆ. ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಆರೋಪಿ ಕೃಷ್ಣ ಹನುಮಂತಪ್ಪ ದೇವರ ಗುಡ್ಡ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಈತ ಪರ್ನಿಚರ್ ತಯಾರಿಕೆ ಘಟಕವನ್ನು ಹಾಕಿದ್ದು ಸಮೀಪದ ಅರಣ್ಯದಿಂದ ಅಕ್ರಮವಾಗಿ ಸಾಗುವಾನಿ ಕಟ್ಟಿಗೆಯನ್ನು ತರಿಸುತ್ತಿದ್ದ. ನಂತರ ಫರ್ನಿಚರ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು ಸಂಗ್ರಹಿಸಿದ ಸಾಗುವಾನಿ ಕಟ್ಟಿಗೆ ಹಾಗೂ ಇತರ ವಸ್ತುಗಳ್ನ್ನು ಮುಟ್ಟುಗೋಲು ಹಾಕಿದ್ದಾರೆ.

ಡಿ ಎಫ್ ಒ ಎಸ್.ಜಿ ಹೆಗಡೆ ಮಾರ್ಗದರ್ಶನದಲ್ಲಿ ಎಸಿಎಫ್ ಎಸ್.ಎಂ.ವಾಲಿ, ಆರ್ ಎಫ್ ಒ.ಮಂಜುನಾಥ ನಾಯ್ಕ, ಸಿಬ್ಬಂದಿಗಳಾದ ಶಿವಪ್ರಕಾಶ್ ಬಿ.ಜೆ, ಅರುಣ್ ಎಂ, ಶಂಕರ ಬಾಗೇವಾಡಿ, ಸಂತೋಷ ಕುರಬರ ಹಾಗೂ ಅರಣ್ಯ ರಕ್ಷಕರು, ಅರಣ್ಯ ವೀಕ್ಷಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.