‘ನಾನು ಮನಸ್ಸು ಮಾಡಿದ್ರೆ ಬಿಜೆಪಿಯವರು ಎಲ್ಲೂ ಫ್ಲೆಕ್ಸ್‌ ಹಾಕಲು ಸಾಧ್ಯವಿಲ್ಲ’ – ಡಿಕೆಶಿ ಕಿಡಿ

ಗುಂಡ್ಲುಪೇಟೆ: ಭಾರತ್ ಜೋಡೋ‌ ಯಾತ್ರೆಗೆ ಸ್ವಾಗತ ಕೋರಲು ಹಾಕಿದ್ದ ಫ್ಲೆಕ್ಸ್‌ ಹರಿದ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಈ ಸಂಬಂಧ ಸದಾಶಿವನಗರದಲ್ಲಿ ಮಾತನಾಡಿದ ಡಿಕೆಶಿ, ಫ್ಲೆಕ್ಸ್‌ ಹರಿದು ಹಾಕುವುದು ಒಳ್ಳೆಯ ಸಂಸ್ಕೃತಿಯಲ್ಲ. ಚುಚ್ಚಿದರು ಗುಂಡಿಕ್ಕಿದರೂ ಕಾಂಗ್ರೆಸ್ಸಿಗರು ಹೆದರಲ್ಲ. ನಾನು ಮನಸ್ಸು ಮಾಡಿದ್ರೆ ಅವರು ಎಲ್ಲೂ ಕಾರ್ಯಕ್ರಮ ಫ್ಲೆಕ್ಸ್‌ ಹಾಕೋದಕ್ಕೆ ಆಗಲ್ಲ ಎಂದು ಸಿಎಂ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಡಿಕೆಶಿ ಎಚ್ಚರಿಕೆ ನೀಡಿದರು.

ಇನ್ನು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ‌ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಮ್ಮಿಕೊಂಡಿರುವ ಭಾರತ್ ಜೋಡೋ‌ ಯಾತ್ರೆ ಸೆ.30 ರಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಪಕ್ಷದ ವತಿಯಿಂದ ಫ್ಲೆಕ್ಸ್‌ ಹಾಕಲಾಗಿತ್ತು. ನಾಯಕರ ಫ್ಲೆಕ್ಸ್​ಗಳನ್ನು ಇಂದು ಬೆಳಗಿನಜಾವ ದುಷ್ಕರ್ಮಿಗಳು ಹರಿದುಹಾಕಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಸುರಭಿ‌ ಹೋಟೆಲ್‌ನಿಂದ ಊಟಿ ರಸ್ತೆಯ ಉದ್ದಕ್ಕೂ ಅಳವಡಿಸಿದ್ದ ಫ್ಲೆಕ್ಸ್​ಗಳಿಗೆ ಕಿಡಿಗೇಡಿಗಳು ಬ್ಲೇಡ್ ಹೊಡೆದಿದ್ದಾರೆ‌. ಎಐಸಿಸಿ‌ ನಾಯಕ ರಾಹುಲ್‌ ಗಾಂಧಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಚಾಮರಾಜನಗರ ಶಾಸಕ ಸಿ ಪುಟ್ಟರಂಗಶೆಟ್ಟಿ ಭಾವಚಿತ್ರಗಳಿರುವ ಫ್ಲೆಕ್ಸ್ ಅನ್ನು ಹರಿದು ಹಾಕಲಾಗಿದೆ.