ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಪರಿಶೀಲನೆಗೆ ಕೇಂದ್ರ ತಂಡ ಭೇಟಿ

ಯಲ್ಲಾಪುರ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅನೇಕ ಎಡರು-ತೊಡರುಗಳನ್ನು ದಾಟಿ ಕೊನೆಗೂ ನಿರ್ಣಾಯಕ ಘಟ್ಟ ತಲುಪಿದಂತಿದೆ. ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು ಸಮಿತಿಯು ಸ್ಥಗಿತಗೊಂಡಿರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಮಾರ್ಗ ಪರಿಶೀಲನೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕರಿಸುವ ಕಾರ್ಯ ಕೈಗೊಳ್ಳುತ್ತಿದೆ.

ಅದರಂತೆ ಯಲ್ಲಾಪುರ ತಾಲೂಕಿನಲ್ಲಿ ಹಾದು ಹೋಗುವ ರೈಲ್ವೆ ಮಾರ್ಗದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೇಂದ್ರದಿಂದ ಆಗಮಿಸಿದ ತಂಡವು ಅರಬೈಲು ಘಟ್ಟ ಪ್ರದೇಶ , ಭೂಕುಸಿತವಾದ ತಳಕೇಬೈಲು, ಬಾಸಲ್‌ನ ಚಿಟಕೇಬೈಲ ಇನ್ನಿತರ ಸ್ಥಳಗಳಲ್ಲಿ ಪರಿಶೀಲನೆ ನಡೆಸಿತು. ಸಮಿತಿಯ ಸದಸ್ಯರು ಮಾಧ್ಯಮದವರೊಂದಿಗೆ ಏನನ್ನೂ ಹಂಚಿಕೊಳ್ಳದೇ ತಮ್ಮ ಪರಿಶೀಲನಾ ಕಾರ್ಯ ಕೈಗೊಂಡು ಮುಕ್ತಾಯಗೊಳಿಸಿ ಮರಳಿದರು.