ಬಿಗ್​ಬಾಸ್​ ಪಯಣ ಕೊನೆಗೊಳಿಸಿದ ಜಯಶ್ರೀ, ಜಶ್ವಂತ್​, ಸೋಮಣ್ಣ, ಸೋನು ಗೌಡ

ಬೆಂಗಳೂರು: ಬಿಗ್​ ಬಾಸ್​ ಶೋ ಗೆಲ್ಲಬೇಕು ಎನ್ನುವ ಆಸೆಯಿಂದಲೇ ಎಲ್ಲರೂ ದೊಡ್ಮನೆಗೆ ಕಾಲಿಡುತ್ತಾರೆ. ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಕನ್ನಡದ ಬಿಗ್​ ಬಾಸ್ ಶೋ ಪ್ರಸಾರವಾಗಿದೆ. ಈ ಶೋನಲ್ಲಿ ಟಾಪ್​ 4 ಸ್ಥಾನ ಪಡೆದವರಿಗೆ ಮಾತ್ರ ಬಿಗ್​ ಬಾಸ್​ ಕನ್ನಡ ಸೀಸನ್​ 9 ಟಿವಿ ಆವೃತ್ತಿಗೆ ಚಾನ್ಸ್​ ಸಿಗುತ್ತದೆ ಎಂದು ಮೊದಲೇ ತಿಳಿಸಲಾಗಿತ್ತು. ಆದರೆ 8 ಮಂದಿ ಫಿನಾಲೆ ವಾರದವರೆಗೂ ಬಂದಿದ್ದು, ನಾಲ್ವರು ಕೊನೇ ಕ್ಷಣದಲ್ಲಿ ಹೊರನಡೆದಿದ್ದಾರೆ.

ಜಯಶ್ರೀ ಆರಾಧ್ಯ, ಜಶ್ವಂತ್​ ಬೋಪಣ್ಣ, ಸೋಮಣ್ಣ ಮಾಚಿಮಾಡ ಮತ್ತು ಸೋನು ಶ್ರೀನಿವಾಸ್ ಗೌಡ ಅವರು ಫಿನಾಲೆ ವಾರದಲ್ಲಿ ಶೋದಿಂದ ಔಟ್​ ಆಗಿದ್ದಾರೆ. ಇನ್ನುಳಿದ ಸ್ಪರ್ಧಿಗಳಾದ ಆರ್ಯವರ್ಧನ್​ ಗುರೂಜಿ, ರೂಪೇಶ್​ ಶೆಟ್ಟಿ, ರಾಕೇಶ್​ ಅಡಿಗ ಮತ್ತು ಸಾನ್ಯಾ ಅಯ್ಯರ್​ ಗೆದ್ದು ಬಿಗ್​​ ಬಾಸ್​ ಕನ್ನಡ ಸೀಸನ್​ 9 ರ ಟಿವಿ ಆವೃತ್ತಿಗೆ ಚಾನ್ಸ್​ ಪಡೆದಿದ್ದಾರೆ.

ಜಯಶ್ರೀ ಆರಾಧ್ಯ ಅವರು ಸತತ 5 ವಾರವೂ ನಾಮಿನೇಟ್​ ಆಗಿದ್ದರೂ ಸಹ ವೀಕ್ಷಕರ ವೋಟ್​ ಪಡೆದು ತಮ್ಮ ಸ್ಥಾನ ಉಳಿಸಿಕೊಂಡಿದ್ದರು. ಆದರೆ ಫಿನಾಲೆ ವಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ವೋಟ್​ ದೊರೆಯದ ಕಾರಣ ಅವರ ಬಿಗ್​ ಬಾಸ್​ ಪಯಣ ಕೊನೆಗೊಂಡಿದೆ. ಕನ್ನಡ ಸರಿಯಾಗಿ ಬರದ ಕಾರಣಕ್ಕೆ ಜಶ್ವಂತ್​ ಬೋಪಣ್ಣನನ್ನು ವೀಕ್ಷಕರು ಹೆಚ್ಚಾಗಿ ಇಷ್ಟಪಟ್ಟಿಲ್ಲ ಎನಿಸುತ್ತದೆ. ಆದರೂ ಫಿನಾಲೆ ವಾರದವರೆಗೂ ಪೈಪೋಟಿ ನೀಡಿದ್ದಾರೆ. ಅಂತಿಮವಾಗಿ ಅವರು ಕೂಡ ಹೆಚ್ಚಿನ ವೋಟ್​ ಪಡೆಯದ ಕಾರಣ ಬಿಗ್​ ಬಾಸ್​ ಆಟ ಮುಗಿಸಿದ್ದಾರೆ.

ಅದೇ ರೀತಿ ಸೋಮಣ್ಣ ಮಾಚಿಮಾಡ ಕೂಡ ಕೊನೇ ವಾರದಲ್ಲಿ ಶೋದಿಂದ ಔಟ್​ ಆಗಿದ್ದಾರೆ. ದೊಡ್ಮನೆಯಲ್ಲಿ ಹೆಚ್ಚು ಮನರಂಜನೆ ನೀಡಲು ಅವರಿಗೆ ಸಾಧ್ಯವಾಗದ ಕಾರಣಕ್ಕಾಗಿ ಹೆಚ್ಚು ವೋಟ್​ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಸೋನು ಶ್ರೀನಿವಾಸ್​ ಗೌಡ ಕೊನೇ ಹಂತದವರೆಗೂ ಆತ್ಮವಿಶ್ವಾಸ ಉಳಿಸಿಕೊಂಡು ಫೈನಲ್​ ನಲ್ಲಿ ಸಾನ್ಯಾ ಐಯ್ಯರ್​ ಪೈಪೋಟಿ ಕೊಟ್ಟಿದ್ದರು. ಕಡೆಗೂ ಸೋನು ಗೌಡ ಟಿವಿ ಸೀಸನ್​ಗೆ ಹೋಗಬೇಕು ಎಂದುಕೊಂಡಿದ್ದ ಕನಸು ಭಗ್ನವಾಗಿದೆ.