ಸೇಬುಹಣ್ಣು ಸಾಗಿಸುತ್ತಿದ್ದ ಲಾರಿ ಪಲ್ಟಿ: ರಸ್ತೆಯಲ್ಲಿ ಬಿದ್ದಿದ್ದ ಸೇಬು ತೆಗೆದುಕೊಳ್ಳಲು ಮುಗಿಬಿದ್ದ ಜನ.!

ಯಲ್ಲಾಪುರ: ಸೇಬುಹಣ್ಣು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ನಡೆದಿದೆ. ದೆಹಲಿಯಿಂದ ಕಾಸರಗೋಡಿಗೆ ಸೇಬು ಹಣ್ಣು ಸಾಗಿಸುತ್ತಿದ್ದ ಲಾರಿ, ಆರತಿಬೈಲ್ ಘಟ್ಟದ ತಿರುವಿನಲ್ಲಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ.

ಅವಘಡದಲ್ಲಿ ಲಾರಿಯಲ್ಲಿದ್ದ ಸೇಬು ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಜನತೆ ಹಣ್ಣು ತೆಗೆದುಕೊಳ್ಳಲು ಮುಗಿಬಿದ್ದರು. ಘಟನೆಯಲ್ಲಿ ಲಾರಿ ಜಖಂಗೊಂಡಿದೆ. ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕ ಹಾಗೂ ನಿರ್ವಾಹಕರನ್ನು ಹೊರಕ್ಕೆ ತರಲಾಗಿದೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಯಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.