ಆಸ್ಪತ್ರೆಯಿಂದ ಬಿಡುಗಡೆಯಾದ ಧರ್ಮೇಂದ್ರ; ಮನೆಯಲ್ಲಿ ಮುಂದುವರಿಯಲಿದೆ ಚಿಕಿತ್ಸೆ

ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ಅವರನ್ನು ವೆಂಟಿಲೇಟರ್‌ನಲ್ಲಿಯೇ ಇಡಲಾಗಿತ್ತು. ಈ ವೇಳೆ ಅವರು ನಿಧನರಾಗಿದ್ದಾರೆ ಎಂಬ ವದಂತಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಆದರೆ ಕುಟುಂಬದವರು ಅದನ್ನು ತಳ್ಳಿಹಾಕಿದ್ದರು. ಈಗ ಧರ್ಮೇಂದ್ರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಅವರನ್ನು ಮನೆಗೆ ಕರೆದುಕೊಂಡು ಹೋಗಲಾಗಿದೆ. ಮನೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಧರ್ಮೇಂದ್ರ ಅವರ ಆರೋಗ್ಯ ಹದಗೆಟ್ಟಿದ್ದ ಸುದ್ದಿ ಹರಡುತ್ತಿದ್ದಂತೆಯೇ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸಲ್ಮಾನ್ ಖಾನ್, ಶಾರುಖ್ ಖಾನ್, ಗೋವಿಂದ ಸೇರಿದಂತೆ ಕುಟುಂಬದ ಸದಸ್ಯರಾದ ಇಶಾ ದಿಯೋಲ್, ಬಾಬಿ ಡಿಯೋಲ್, ಸನ್ನಿ ಡಿಯೋಲ್ ಹಾಗೂ ಹೇಮಾ ಮಾಲಿನಿ ಭೇಟಿ ನೀಡಿದ್ದರು. ಅವರ ನಿಧನದ ವದಂತಿ ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿದ್ದರೂ, ಹೇಮಾ ಮಾಲಿನಿ ಸ್ವತಃ ಸ್ಪಷ್ಟನೆ ನೀಡಿದ್ದರು.

ಇದೀಗ ಕುಟುಂಬದ ಕಡೆಯಿಂದ ಅಭಿಮಾನಿಗಳಿಗೆ ಸಂತೋಷದ ಸುದ್ದಿ ಸಿಕ್ಕಿದೆ — ಧರ್ಮೇಂದ್ರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಅವರನ್ನು ಮನೆಗೆ ಕರೆದುಕೊಂಡು ಹೋಗಲಾಗಿದೆ. “ಧರ್ಮೇಂದ್ರ ಅವರು ಇಂದು (ನವೆಂಬರ್ 12) ಬೆಳಿಗ್ಗೆ 7.30ಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ಕುಟುಂಬ ನಿರ್ಧರಿಸಿದೆ,” ಎಂದು ವೈದ್ಯರಾದ ಪ್ರತೀತ್ ತಿಳಿಸಿದ್ದಾರೆ.