ಭಟ್ಕಳ ಆ.13: ನಗರದ ತೆಂಗಿನಗುಂಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಕಾರನ್ನು ತಡೆದು ಪೊಲೀಸರು ಅಂದಾಜು ಮೌಲ್ಯ ರೂ.50 ಸಾವಿರ 1.750 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ನಗರ ಠಾಣೆಯ ಪಿಎಸ್ಐ ನವೀನ್ ಎಸ್. ನಾಯ್ಕ ಅವರ ನೇತೃತ್ವದ ತಂಡ ನಡೆಸಿದ ದಾಳಿಯಲ್ಲಿ, ಗಾಂಜಾ ಸಾಗಾಟಕ್ಕೆ ಬಳಸಿದ ಕಾರು, ಡಿಜಿಟಲ್ ತೂಕಮಾಪನ ಯಂತ್ರ ಹಾಗೂ ಇತರೆ ವಸ್ತುಗಳನ್ನು ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮತ್ತು ಸ್ಥಳೀಯ ಗ್ರಾಮ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ವಶಪಡಿಸಿಕೊಳ್ಳಲಾಯಿತು.
ಆರೋಪಿಗಳಾದ ಹೊನ್ನಾವರ ತಾಲೂಕು ಟೊಂಕಾ ಕಾಸರಕೋಡ ಮೂಲದ ಸಯ್ಯದ್ ಗುಲ್ಜಾರ್ (22) ಮತ್ತು ಕಾರಿನ ಮಾಲೀಕ ಸಯ್ಯದ್ ಮುಕ್ತಿಯಾರ್ ದಾಳಿ ವೇಳೆ ಪರಾರಿಯಾದರು.
ಆರೋಪಿಗಳ ಮೇಲೆ ಎನ್ಡಿಪಿಎಸ್ ಕಾಯಿದೆ ಅಡಿಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ತಿಮ್ಮಪ್ಪ ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಗೆ ಡಿವೈಎಸ್ಪಿ ಮಹೇಶ್ ಎಂ.ಕೆ. ಮತ್ತು ಸಿಪಿಐ ದಿವಾಕರ ಮಾರ್ಗದರ್ಶನ ನೀಡಿದರು.

