ಡಿಕೆಶಿಗೆ ತಕ್ಕ ಪ್ರತಿಫಲ ಸಿಗಬೇಕು – ಇಕ್ಬಾಲ್ ಹುಸೇನ್ ಬೆಂಬಲ ಘೋಷಣೆ

ರಾಮನಗರ: ಡಿ.ಕೆ.ಶಿವಕುಮಾರ್ ನಮ್ಮ ನಾಯಕರು. ಅವರ ಶ್ರಮ, ಹೋರಾಟಕ್ಕೆ ಪ್ರತಿಫಲ ಸಿಗಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ಡಿಸಿಎಂ ಡಿಕೆಶಿ ಸಿಎಂ ಆಗಬೇಕು ಎಂಬ ವಿಚಾರ ಚರ್ಚೆ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ಆ ಸಂದರ್ಭದಲ್ಲಿ ಅದನ್ನ ಹೇಳಿದ್ದೀನಿ. ಆ ಹೇಳಿಕೆಗೆ ಈಗಲೂ ನಾನು ಬದ್ಧವಾಗಿದ್ದೇನೆ. ಈಗಲೂ ನನ್ನ ಹೇಳಿಕೆಯನ್ನ ನಾನು ಸಮರ್ಥಿಸಿಕೊಳ್ಳುತ್ತೇನೆ. ಡಿಕೆಶಿಯವರಿಗೆ ಸ್ಥಾನಮಾನ, ಗೌರವ ಕೊಡಿ ಅಂತ ಕೇಳೋಕೆ ನನಗೆ ಹಕ್ಕಿಲ್ವಾ? ನಾನು ಈ ಜಿಲ್ಲೆಯಲ್ಲಿ ಹುಟ್ಟಿದ್ದೀನಿ, ಅವರು ನಮ್ಮ ಜೊತೆ ಹುಟ್ಟಿದ್ದಾರೆ. ಅವರ ಹೋರಾಟಕ್ಕೆ ಬೆಲೆ ಇಲ್ವಾ ಎಂದು ಪ್ರಶ್ನಿಸಿದ ಇಕ್ಬಾಲ್ ಹುಸೇನ್, ಪರೋಕ್ಷವಾಗಿ ಡಿಕೆಶಿಗೆ ಸಿಎಂ ಸ್ಥಾನ ಸಿಗಬೇಕು ಎಂದ್ರು ಆಗ್ರಹಿಸಿದರು. 

ಇನ್ನೂ ಆ.8ಕ್ಕೆ ಚುನಾವಣಾ ಅಕ್ರಮದ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗದ ಹೋರಾಟಕ್ಕೆ ಹೈಕಮಾಂಡ್ ರೂಪುರೇಷೆ ನೀಡಿದೆ. ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅವರಿಗೆ ಶಕ್ತಿತುಂಬುವ ಕೆಲಸವನ್ನ ನಾವು ಮಾಡುತ್ತೇವೆ. ನಮ್ಮ ಜಿಲ್ಲೆಯಿಂದ ಸುಮಾರು 20ಸಾವಿರ ಮಂದಿ ಭಾಗಿಯಾಗುತ್ತಿದ್ದೇವೆ. ಅವರ ಹೋರಾಟಕ್ಕೆ ನಾವು ಬೆಂಬಲ ಕೊಡುತ್ತೇವೆ. ಇವಿಎಂ ತೊಂದರೆಯಾ? ಏನು ಆಗಿದೆ ಎಂಬುದು ನಮಗೆ ಗೊತ್ತಿಲ್ಲ. ಯಾವ ರೀತಿ ಅಕ್ರಮ ಆಗಿದೆ ಎಂಬುದರ ಬಗ್ಗೆ ನಮ್ಮ ರಾಷ್ಟ್ರ ನಾಯಕರು ಮಾಹಿತಿ ಕೊಡುತ್ತಾರೆ ಎಂದು ತಿಳಿಸಿದರು.