ಅನಾರೋಗ್ಯದಿಂದ ಕನ್ನಡಪ್ರಭ ಪತ್ರಿಕೆ ವರದಿಗಾರ ಗುರುಪ್ರಸಾದ ನಿಧನ

ಕಾರವಾರ ಜು.18 : ಕಾರವಾರದ ಕನ್ನಡಪ್ರಭ ಪತ್ರಿಕೆ ವರದಿಗಾರರಾಗಿದ್ದ ಗುರುಪ್ರಸಾದ ಹೆಗಡೆ(34) ಶುಕ್ರವಾರ ನಿಧನರಾಗಿದ್ದಾರೆ. ಶಿರಸಿ ತಾಲ್ಲೂಕಿನ ಮಂಜುಗುಣಿಯ ತೋಟದಳ್ಳಿ ಗ್ರಾಮದ ನಿವಾಸಿಯಾಗಿದ್ದ ಗುರುಪ್ರಸಾದ ಶಿರಸಿಯಲ್ಲಿಯೂ ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.

ಕಳೆದ 9 ವರ್ಷಗಳಿಂದ ಕಾರವಾರದಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಗುರುಪ್ರಸಾದ ಸದಾ ನಗುಮೊಗದ ಸ್ನೇಹಿತನಾಗಿ, ಎಲ್ಲರೊಂದಿಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದರು. ವರದಿಗಾರಿಕೆಯಲ್ಲಿ ವಸ್ತನಿಷ್ಠ, ಪ್ರಾಮಾಣಿಕ, ನಿಷ್ಪಕ್ಷಪಾತತೆಯನ್ನು ಹೊಂದಿದ್ದ ಎಲ್ಲರ ನೆಚ್ಚಿನ `ಗುರು’ ನೇರ ನುಡಿಯಿಂದಲೇ ಎಲ್ಲರ ಪ್ರೀತಿಯನ್ನು ಗಳಿಸಿದ್ದರು. ತಮ್ಮ ವಸ್ತುನಿಷ್ಠ ವರದಿಗಳಿಂದ ಸಮಾಜದ ಅಂಕು ಡೊಂಕುಗಳನ್ನು ಅಭಿವೃದ್ದಿಪಡಿಸಿ ಪತ್ರಿಕೋದ್ಯಮದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದರು.

ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಬನವಾಸಿಯ ಅವರ ಸಂಬಂಧಿಗಳ ಮನೆಯಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕಾರವಾರ ಹಾಗೂ ಶಿರಸಿ ಪತ್ರಕರ್ತರ ಬಳಗ ಸಂತಾಪ‌ ಸೂಚಿಸಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಮಾದ್ಯಮ ಬಳಗ ಶ್ರದ್ಧಾಂಜಲಿ‌ ಅರ್ಪಿಸಿದೆ.