ಮಂತ್ರಾಲಯಕ್ಕೆ ಬಂದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ನೀರುಪಾಲು

ರಾಯಚೂರು : ರಾಯಚೂರಿನಲ್ಲಿ ಘೋರವಾದ ದುರಂತವೊಂದು ಸಂಭವಿಸಿದೆ. ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದಾಗ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾದ ಯುವಕರನ್ನು ಹಾಸನದ ಅರಸೀಕೆರೆ ತಾಲೂಕಿನ ಜಾಗವಲ್ ಗ್ರಾಮದ ಅಜಿತ್ (20), ಸಚಿನ್ (20) ಹಾಗೂ ಪ್ರಮೋದ್​ (19) ಎಂದು ಗುರುತಿಸಲಾಗಿದೆ.

ನಿನ್ನೆ ಸ್ನೇಹಿತರ ತಂಡ ಮಂತ್ರಾಲಯಕ್ಕೆ ಬಂದಿದ್ದರು. ಇವರೆಲ್ಲರೂ ಡಿಗ್ರಿ ಓದುತ್ತಿದ್ದವರು. ತುಂಗಭದ್ರಾ ನದಿಯ ಬಳಿ ಐವರು ಸ್ಥಾನ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ನೀರಿನ ರಭಸಕ್ಕೆ ಮೂವರು ವಿದ್ಯಾರ್ಥಿಗಳು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ನದಿಗೆ ಹೆಚ್ಚಿನ ನೀರು ಹರಿಬಿಟ್ಟಿರಿಂದ, ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನದಿಯಲ್ಲಿ ನೀರಿನ ರಭಸ ಕಂಡು ಬೇಡವೆಂದು ಹೇಳಿದರೂ ಈಜಲು ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಪೊಲೀಸರು ಹಾಗೂ ಈಜುಗಾರರ ತಂಡದಿಂದ ಯುವಕರ ಶೋಧ ಕಾರ್ಯ ನಡೆದಿದೆ. ರಾತ್ರಿಯಾಗಿದ್ದರಿಂದ ಶೋಧ ಕಾರ್ಯಾಚರಣೆ ನಿಲ್ಲಿಸಿದ್ದು, ಭಾನುವಾರ ಬೆಳಗ್ಗೆ ಪುನರಾರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.