
ಬೆಂಗಳೂರು: ನಗರದ ಹಲವೆಡೆ ತಡರಾತ್ರಿ ಭಾರೀ ಮಳೆ ಸುರಿದು, ಪ್ರಮುಖ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ವಿವಿಧ ಪ್ರದೇಶಗಳಲ್ಲಿ 3.2 ಸೆಂ.ಮೀ.ವರೆಗೂ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಮಳೆಯೊಂದಿಗೆ ಭಾರೀ ಗಾಳಿಗೆ ಅಲ್ಲಲ್ಲಿ ಅವಾಂತರಗಳೂ ಸಂಭವಿಸಿವೆ. ಬೃಹತ್ ಮರಗಳು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಈ ನಡುವೆ ನಿನ್ನೆ ರಾತ್ರಿ ಬಿದ್ದ ಮರಗಳನ್ನ ಈವರೆಗೂ ತೆರವು ಮಾಡದ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಇಡೀ ಶಾಪ ಹಾಕಿದ್ದಾರೆ.
ಕಾರಿನ ಮೇಲೆ ಬಿದ್ದ ಬೃಹತ್ ಮರ; ಚಾಲಕ ಗ್ರೇಟ್ ಎಸ್ಕೇಪ್
ಇನ್ನೂ ನಿನ್ನೆ ಸಂಜೆ 6:10ರ ಸುಮಾರಿಗೆ ಮಳೆ ಸಂದರ್ಭದಲ್ಲಿ ಶೇಷಾದ್ರಿಪುರಂ ಕಾನೂನು ಕಾಲೇಜು ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರವೊಂದು ಬಿದ್ದಿದೆ. ಮರ ಬಿದ್ದ ರಭಸಕ್ಕೆ 3 ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಆದ್ರೆ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರವನ್ನ ಈವರೆಗೂ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳು ತೆರವು ಮಾಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಎಂಜಿ ರೋಡ್ ಬಳಿಯ ಶಾಂತಲಾ ರಸ್ತೆಯಲ್ಲಿ ಮುಖ್ಯರಸ್ತೆಯಲ್ಲೂ ಬೃಹತ್ ಗಾತ್ರದ ಮರ ಬಿದ್ದು ವಾಹನ ಸವಾರರು ಪರದಾಡುವಂತಾಗಿತ್ತು.


