ಹಣ ಕೊಟ್ಟವರಿಗೆ ಬೇಕಾಬಿಟ್ಟಿ ಅಂಕ: ಗುಲಬರ್ಗಾ ವಿವಿಯ ಕರ್ಮಕಾಂಡ ಬಯಲು

ಕಲಬುರಗಿ, ಜೂನ್​ 25: ಗುಲಬರ್ಗಾ ವಿಶ್ವವಿದ್ಯಾಯಲದಲ್ಲಿ  ಹಣ ಕೊಟ್ಟರೆ ಸಾಕು ನಿಮಗೆ ಬೇಕಾದಷ್ಟು ಅಂಕ ನೀಡಲಾಗುತ್ತಿದೆ. ಅಷ್ಟೋ ಜನ ಹಣ ಕೊಟ್ಟು ರ‍್ಯಾಂಕ್​ ಕೂಡ ಪಡೆದಿದ್ದಾರೆ. . ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಉನ್ನತ ಶಿಕ್ಷಣ ಸಚಿವರು ಸಿಐಡಿ ತನಿಖೆಗೆ ವಹಿಸಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದ್ದಾರೆ.

ಹೌದು.. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ಪರೀಕ್ಷೆಯ ಮೌಲ್ಯಮಾಪನದಲ್ಲಿ ಗೋಲ್ಮಾಲ್ ಬಗ್ಗೆ ಎರಡು ದಿನಗಳ ಹಿಂದೆ ಮಾಧ್ಯಮಗಳು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಮೌಲ್ಯಮಾಪಕರು ನೀಡಿದ ಅಂಕಗಳನ್ನೇ ತಿದ್ದಿ ತಮಗೆ ಬೇಕಾದವರಿಗೆ ಬೇಕಾದಷ್ಟು ಅಂಕ ನೀಡಿರುವುದನ್ನು ಬಯಲಿಗೆಳೆಯಲಾಗಿತ್ತು. ಮೌಲ್ಯಮಾಪನ ವಿಭಾಗದ ಕೆಲ ಖದೀಮ ಸಿಬ್ಬಂದಿಗಳು, ಫೈನಲ್​​ ಮಾರ್ಕ್ಸ್ ಶೀಟನ್ನೇ ತಿದ್ದಿ ಹಣ ಕೊಟ್ಟವರಿಗೆ ಬೇಕಾದಷ್ಟು ಅಂಕ ನೀಡಿದ್ದನ್ನ ಸಾಕ್ಷ್ಯ ಸಮೇತ ಬಿತ್ತರಿಸಿತ್ತು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಿಷ್ಟು 

ವಿಶ್ವವಿದ್ಯಾಯಲದ ಕರ್ಮಕಾಂಡ ಬಯಲಾಗುತ್ತಿದ್ದಂತೆ ಎಚ್ಚೆತ್ತ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಗುಲ್ಬರ್ಗ ವಿವಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಮಗ್ರ ವರದಿ ತರಿಸಿಕೊಳ್ಳುತ್ತೇವೆ. ಅಲ್ಲದೇ ಶೀಘ್ರದಲ್ಲೇ ಮೌಲ್ಯಮಾಪನ ಹಗರಣವನ್ನ ಸಿಐಡಿ ತನಿಖೆಗೆ ಒಪ್ಪಿಸುವುದಕ್ಕೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗುವುದು ಎಂದಿದ್ದಾರೆ.

ಅದಕ್ಕೂ ಮೊದಲು ಹಗರಣದ ಕುರಿತು ಪ್ರಾಥಮಿಕ ವರದಿಯನ್ನ ತರಿಸಿಕೊಳ್ಳುತ್ತೇವೆ. ಏಕೆಂದರೆ ಗುಲಬರ್ಗಾ, ರಾಯಚೂರು, ಶಿವಮೊಗ್ಗ ವಿಶ್ವವಿದ್ಯಾಲಯಗಳಲ್ಲಿ ಈ ಬಗ್ಗೆ ಸಮಸ್ಯೆಗಳು ಬಹಳ ಆಗುತ್ತಿವೆ. ಅಲ್ಲದೆ ತಕ್ಷಣ ಕ್ರಮ ಕೂಡ ಕೈಗೊಂಡಿದ್ದೇವೆ. ಆದರೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮೌಲ್ಯ ಮಾಪನ ಹಗರಣ ದೊಡ್ಡದಿರುವುದರಿಂದ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುತ್ತೇವೆ ಎಂದು ಹೇಳಿದ್ದಾರೆ.

ಸದ್ಯ ಮೇಲ್ನೋಟಕ್ಕೆ ಅಂಕಗಳನ್ನ ತಿದ್ದಿರುವುದು ಯಾರು ಎನ್ನೋದು ಗೊತ್ತಾಗಿದೆ. ವಿವಿ ಆಡಳಿತ ಮಂಡಳಿಗೆ ಮೌಲ್ಯಮಾಪನ ವಿಭಾಗದಲ್ಲಿ ಈ ಗೋಲ್ಮಾಲ್ ನಡೆದಿದೆ ಎನ್ನೋದು ಗೊತ್ತಿದೆ. ಆದರೂ ಇಲ್ಲಿಯವರೆಗೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ, ಬದಲಾಗಿ ಒಬ್ಬರ, ಮೇಲೋಬ್ಬರು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಹಿಂದೆ ಮೌಲ್ಯಮಾಪನ ವಿಭಾಗದ ಕುಲಸಚಿವರು ಹಾಗೂ ಅಧಿಕಾರಿಗಳ ಕಡೆ ಬೊಟ್ಟು ಮಾಡಲಾಗಿತ್ತು. ಆದರೆ ಅಲ್ಲಿ ಅಂಕಗಳನ್ನ ತಿದ್ದಿ ಗೋಲ್ಮಾಲ್ ಮಾಡಿದವರ ವಿರುದ್ದ ಕ್ರಮ ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿರುವುದು ಏಕೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಸದ್ಯ ಗುಲಬರ್ಗಾ ಯೂನಿವರ್ಸಿಟಿ ಕರ್ಮಕಾಂಡ ಸಿಐಡಿ ಹೆಗಲೆರುವ ಸಾಧ್ಯತೆ ದಟ್ಟವಾಗಿದೆ. ಆದಷ್ಟು ಬೇಗ ರಾಜ್ಯಪಾಲರು ಒಪ್ಪಿಗೆ ಕೊಟ್ಟರೆ ಹಗರಣದ ತಿಮಿಗಿಂಲಗಳ ಬಣ್ಣ ಬಯಲಾಗುತ್ತೆ. ಉನ್ನತ ಮಟ್ಟದ ತನಿಖೆ ನಡೆದು ಕಳ್ಳ ಸಿಬ್ಬಂದಿಗಳನ್ನ ವಿವಿಯಿಂದ ಹೊರಹಾಕಲಾಗುತ್ತಾ ಕಾದುನೋಡಬೇಕಿದೆ.