ಧಾರವಾಡದಲ್ಲಿ ವರುಣನ ಆರ್ಭಟ – ಬೆಣ್ಣಿ ಹಳ್ಳದಲ್ಲಿ ಸಿಲುಕಿ ಕುಟುಂಬ ಪರದಾಟ

ಧಾರವಾಡ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ, ಬೆಣ್ಣಿಹಳ್ಳ ತುಂಬಿ ಹರಿಯುತ್ತಿದೆ. ಇದೀಗ ಕುಟುಂಬವೊಂದು ಬೆಣ್ಣಿ ಹಳ್ಳದಲ್ಲಿ ಸಿಲುಕಿಕೊಂಡಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರ ಗ್ರಾಮದ ಬಳಿಯ ತೋಟದ ಮನೆಯಲ್ಲಿ ಕುಟುಂಬ ಸಿಲುಕಿಕೊಂಡಿದೆ. ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ತೋಟದ ಮನೆಯು ಸಂಪೂರ್ಣ ಜಲಾವೃತವಾಗಿದೆ.

ಯಮನೂರ ಗ್ರಾಮದ ಪಕ್ಕದಲ್ಲೇ ಇರುವ ತೋಟದ ಮನೆಯಲ್ಲಿ ಕುಟುಂಬದ ಜೊತೆ ನಾಯಿ ಕೂಡ ಇದೆ. ಸದ್ಯ ಮನೆಯ ಕೆಳಗಡೆ ನೀರು ಬಂದಿದ್ದರಿಂದ, ಕುಟುಂಬಸ್ಥರು ಮೇಲಿನ ಮನೆಯಲ್ಲಿದ್ದಾರೆ. ಇದೀಗ ಮನೆ ಸಂಪೂರ್ಣ ಜಲಾವೃತವಾಗಿರುವುದರಿಂದ ಮನೆಯಿಂದ ಹೊರಬರಲಾರದೇ ಕುಟುಂಬ ಪರದಾಡುತ್ತಿದೆ.

ರಾತ್ರಿಯಿಡೀ ಸುರಿದ ಭಾರಿ ಮಳೆಯ ಪರಿಣಾಮ ಬೆಣ್ಣಿಹಳ್ಳ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದೀಗ ಮಳೆಯ ಅವಾಂತರಕ್ಕೆ ನವಲಗುಂದ ತಾಲೂಕಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ.