ಏಕಾಏಕಿ ತೆರೆದ ಕೆಆರ್​ಎಸ್​ ಡ್ಯಾಂ ಗೇಟ್​: ಸಾವಿರಾರು ಕ್ಯೂಸೆಕ್​ ಕಾವೇರಿ ನದಿ ನೀರು ಪೋಲು

ಕಳೆದ ವರ್ಷ ಬೇಸಿಗೆಯಲ್ಲಿ ಬೆಂಗಳೂರು ಮತ್ತು ಹಳೇ ಮೈಸೂರು ಭಾಗದ ಜನರು ಕುಡಿಯುವ ನೀರು ಮತ್ತು ಗೃಹ ಬಳಕೆ ನೀರಿಗಾಗಿ ಸಾಕಷ್ಟು ಪರದಾಡುವಂತಾಗಿತ್ತು. ಇದಕ್ಕೆ ಕಾರಣ ಕೆಆರ್​ಎಸ್​ ಡ್ಯಾಂನಲ್ಲಿ ನೀರು ಸಂಗ್ರಹ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಇದರಿಂದ ಕಾವೇರಿ ತೀರದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕಹಿ ಘಟನೆಗಳನ್ನು ಮರೆಯುವ ಮುನ್ನವೇ ಕೆಆರ್​ಎಸ್​ ಡ್ಯಾಂನಲ್ಲಿ ಮತ್ತೊಂದು ಅಚಾತುರ್ಯ ನಡೆದಿದೆ. 

ಮಂಡ್ಯ, ಮಾರ್ಚ 25: ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯದ +80 ಗೇಟ್ ಭಾನುವಾರ (ಮಾರ್ಚ್​ 23) ರಾತ್ರಿ ಏಕಾಏಕಿ‌ ತೆರೆದಿದ್ದು, ಸೋಮವಾರ (ಮಾ.24) ರಾತ್ರಿವರೆಗೂ ಗೇಟ್​ ತೆರದೇ ಇತ್ತು. 24 ಗಂಟೆಯಲ್ಲಿ ಬರೋಬ್ಬರಿ ಎರಡು ಸಾವಿರ ಕ್ಯೂಸೆಕ್ ನೀರು‌‌ ನದಿ ಪಾಲಾಗಿದೆ. ಸೋಮವರಾರ ರಾತ್ರಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗೇಟ್ ಬಂದ್ ಮಾಡಿದ್ದಾರೆ. ಈ ವೇಳೆ, ಹೆಚ್ಚಿನ ಪ್ರಮಾಣದ ‌ನೀರು ಇದ್ದಿದ್ದರಿಂದ ಗೇಟ್ ಮುಚ್ಚಲು‌ ಅಧಿಕಾರಿಗಳು ಹರಸಾಹಸ ಪಟ್ಟರು.

ಗೇಟ್​ ತೆರೆಯಲು ಕಾರಣವೇನು?

ಜಲಾಶಯದ ಗೇಟ್ ಏಕಾಏಕಿ ತೆರೆಯುವುದು ವಿರಾಳಾತಿ ವಿರಳ. ಆದರೆ, ಇಲ್ಲಿ ಕೆಆರ್​ಎಸ್​ ಡ್ಯಾಂನ ಗೇಟ್​ ಏಕಾಏಕಿ ತೆರೆದಿದ್ದು, ಅನುಮಾನವನ್ನು ಹುಟ್ಟು ಹಾಕಿದೆ. ಎರಡು ಕಾರಣಗಳಿಂದ ಡ್ಯಾಂn ಗೇಟ್​ ತೆರೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಡ್ಯಾಂನ ಗೇಟ್​ನ ಮೋಟಾರ್​ ರಿವರ್ಸ್​ ಆಗಿದ್ದರಿಂದ ಗೇಟ್​ ತೆರೆದಿರಬಹುದು, ಅಥವಾ ನಮ್ಮದೇ ಸಿಬ್ಬಂದಿ ಗೇಟ್​ ತೆರೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಗೇಟ್​ ಯಾವ ಕಾರಣಕ್ಕೆ ತೆರೆದಿದೆ ಎಂಬುವುದು ತನಿಖೆ ಬಳಿಕವಷ್ಟೇ ತಿಳಿಯಲಿದೆ.

ತನಿಖೆಗೆ ಪೂರಕ ಸಾಕ್ಷ್ಯ ಕೊರತೆ?

ಡ್ಯಾಂನ ಗೇಟ್​ ಏಕಾಏಕಿ ತೆರೆದ ವಿಚಾರ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದು, ಪರಿಶೀಲನೆ ನಡೆಸಲಿದ್ದಾರೆ. ಗೇಟ್​ ಏಕಾಏಕಿ ಹೇಗೆ ತೆರೆಯಿತು ಅಂತ ತನಿಖೆ ನಡೆಸಲು ಪೂರಕವಾದ ಸಾಕ್ಷ್ಯಾಧಾರಗಳು ಅತ್ಯಗತ್ಯ. ಆದರೆ, ಡ್ಯಾಂನ ಸುತ್ತಮುತ್ತ ಯಾವುದೇ ಸಿಸಿ ಕ್ಯಾಮೆರಾಗಳು ಇಲ್ಲ. ಇದರಿಂದ ತನಿಖೆ ನಿಧಾನವಾಗುವ ಸಾಧ್ಯತೆ ಇದೆ.

ತುಂಡಾಗಿತ್ತು ಕ್ರೆಸ್ಟರ್​ ಗೇಟ್​

ಇನ್ನು, ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರೆಸ್ಟರ್​ಗೇಟ್​ ತುಂಡಾಗಿ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ಸಾವಿರಾರು ಕ್ಯೂಸೆಕ್​ ನೀರು ನದಿ ಪಾಲಾಗಿತ್ತು. ಗೇಟ್​ ತುಂಡಾಗುತ್ತಿದ್ದಂತೆ ಕಾರ್ಯಪ್ರವೃತ್ತವಾಗಿದ್ದ ಸರ್ಕಾರ ಮತ್ತು ಡ್ಯಾಂ ನಿರ್ವಹಣಾ ಅಧಿಕಾರಿಗಳು ಒಂದು ವಾರದಲ್ಲಿ ಹೊಸ ಸ್ಟಾಫ್​ ಗೇಟ್​ ಅಳವಡಿಸಿದ್ದರು. ಇದು ಸಹಜವಾಗಿ ಡ್ಯಾಂ ನಿರ್ವಹಣಾ ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಬಳಿಕವಾದರೂ ರಾಜ್ಯದ ಪ್ರಮುಖ ಜಲಾಶಯಗಳ ತಪಾಸಣೆ ಸರ್ಕಾರ ನಡೆಸಬೇಕಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.