ಭೂಗತ ಪಾತಕಿ, ಶಾರ್ಪ್​ಶೂಟರ್ ಬಚ್ಚಾಖಾನ್ ಅರೆಸ್ಟ್: ಇವನ ಹಿಸ್ಟರಿ ಭಯಾನಕ

ಹುಬ್ಬಳ್ಳಿ, ಸೆಪ್ಟೆಂಬರ್​ 04: ಭೂಗತ ಪಾತಕಿ, ಶಾರ್ಪ್​ಶೂಟರ್ ಬಚ್ಚಾಖಾನ್​ ನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಉದ್ಯಮಿ ಕೊಲೆ ಸೇರಿ 3 ಪ್ರಕರಣಗಳ ಆರೋಪಿ ಆಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬಾರಾವ್ ಕೊಲೆ ಬಚ್ಚಾಖಾನ್​ಗೆ ಜೀವಾವಧಿ ಶಿಕ್ಷೆಯಾಗಿತ್ತು. ವ್ಯಕ್ತಿಯೋರ್ವನಿಗೆ ಜೀವ ಬೆದರಿಕೆಹಾಕಿ ಹಣ ವಸೂಲಿ ಮಾಡಿದ್ದ. ಬಳಿಕ ಪೆರೋಲ್​ ಮೇಲೆ ಹೊರ ಬಂದಿದ್ದ ಬಚ್ಚಾಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇಡಲಾಗಿತ್ತು. ಹಿಂಡಲಗಾ ಜೈಲಿನಲ್ಲಿ ಬೇರೆ ಬೇರೆ ಪ್ರಕರಣದ ಕುಖ್ಯಾತ ರೌಡಿಗಳು, ಭೂಗತ ಪಾತಕಿಗಳು ಇರುವ ಹಿನ್ನೆಲೆಯಲ್ಲಿ 2013ರಲ್ಲಿ ಮೈಸೂರು ಜೈಲಿಗೆ ಬಚ್ಚಾಖಾನ್ ಸ್ಥಳಾಂತರಿಸಲಾಗಿತ್ತು. ನಂತರ ಆತ​ನನ್ನು 2017ರಲ್ಲಿ ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಧಾರವಾಡ ಜೈಲಿನಿಂದಲೇ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿದ್ದ. 2021ರಲ್ಲಿ ಧಾರವಾಡದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಬಚ್ಚಾಖಾನ್ 3 ವರ್ಷಗಳಿಂದ ಬಳ್ಳಾರಿ ಜೈಲಿನಲ್ಲಿದ್ದರು. ಪೆರೋಲ್ ಮೇಲೆ ಹೊರಗಿದ್ದ ಆತನನ್ನು ಬೆಂಗಳೂರಿನಲ್ಲಿ ಬಂಧಿಸಿ ನಿನ್ನೆ ಹುಬ್ಬಳ್ಳಿಗೆ ಕರೆತರಲಾಗಿದೆ. ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳಿಂದ ನಟೋರಿಯಸ್ ಬಚ್ಚಾಖಾನ್ ವಿಚಾರಣೆ ಮಾಡಲಾಗುತ್ತಿದೆ.

ನನ್ನ ವಿರುದ್ಧ ಸುಳ್ಳು ಮೊಕದ್ದಮೆ ಎಂದ ಬಚ್ಚಾಖಾನ್ 

ಪೊಲೀಸರು ಬಂಧಿಸುತ್ತಿದ್ದಂತೆ ಹುಬ್ಬಳ್ಳಿಯ ಉಪನಗರ ಠಾಣೆ ಮುಂದೆ ಬಚ್ಚಾಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖಕ್ಕೆ ಹಾಕಿದ್ದ ಮಾಸ್ಕ್ ತೆಗೆದು ಸುಳ್ಳು ಕೇಸ್ ಎಂದಿದ್ದಾರೆ. ನನ್ನ ವಿರುದ್ಧ ಸುಳ್ಳು ಮೊಕದ್ದಮೆ ಹಾಕಿದ್ದಾರೆ ಎಂದು ಕ್ಯಾಮರಾ ಕಂಡ ಕೂಡಲೇ ಮಾಸ್ಕ್ ತೆಗೆದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಿಷ್ಟು 

ಮಾಧ್ಯಮಗಳಿಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಕಳೆದ ತಿಂಗಳು 18 ರಿಂದ 20 ರಂದು ಮಂಟೂರ್ ಗ್ರಾಮದ ವ್ಯಕ್ತಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ. ಜಮೀನು ಮಾರುವ ವಿಚಾರದಲ್ಲಿ ಆತನಿಗೆ ಗೊಂದಲ ಇರುತ್ತೆ. ಹಣಕಾಸಿನ ವಿಷಯವಾಗಿ ಕೆಲವರನ್ನ ಭೇಟಿ ಮಾಡಿರುತ್ತಾನೆ. ಎರಡು ನಂಬರ್​ಯಿಂದ ಬೇರೆ ಬೇರೆ ಸಮಯದಲ್ಲಿ ಕರೆಗಳು ಬಂದಿರುತ್ತೆ. ವ್ಯಕ್ತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

ದೈನಂದಿನ ಆತನ ಚಟುವಟಿಕೆ ಬಗ್ಗೆ ಹೇಳಿ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಡಲಾಗಿರುತ್ತೆ. ಪ್ರಕರಣ ದಾಖಲಿಸಿಕೊಂಡು ಸಿಸಿಬಿಯಿಂದ ತನಿಖೆ ಆರಂಭಿಸಲಾಗಿತ್ತು. ತನಿಖೆಯಲ್ಲಿ ಸಿಕ್ಕ ಸಾಕ್ಷಿ ಪ್ರಕಾರ ಎಂಟು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಏಳು ಜನರನ್ನ ಅರೆಸ್ಟ್ ಮಾಡಿದ್ದೇವೆ. ಇನ್ನೊಬನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ತಾಂತ್ರಿಕ ಸಾಕ್ಷಿ ಸೇರಿ ಹಲವು ಸಾಕ್ಷಿಗಳ ಆಧಾರದ ಮೇಲೆ ತನಿಖೆ ಮಾಡಲಾಗುತ್ತಿದೆ. ದೂರು ನೀಡಿದವರು ಸುಮಾರು 70 ವರ್ಷದ ವೃದ್ಧ. ಅವರ ಕುಟುಂಬದ ಸದಸ್ಯರು ಸಹ ಬೇರೆ ಬೇರೆ ಕಡೆ ಇದ್ದಾರೆ. ಅವರ ಹಿಂದೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದಾರೆ. ಹೀಗಾಗಿ ದೂರುದಾರರ ಹೆಸರನ್ನ ನಾವು ಬಹಿರಂಗ ಪಡಿಸಲು ಆಗುವುದಿಲ್ಲ. ಒಬ್ಬರು ಎಸಿಪಿ, ಇಬ್ಬರು ಇನ್ಸ್ಪೆಕ್ಟರ್​ರಿಂದ ತಂಡ ರಚಿಸಿ ಆರೋಪಿ ವಶಕ್ಕೆ ಪಡೆದಿದ್ದೇವೆ. ಬೆಂಗಳೂರಿನಲ್ಲಿ ನಿನ್ನೆ ವಶಕ್ಕೆ ಪಡೆದು ವಿಚಾರಣೆ ನಡೆದಿದೆ. ಆರೋಪಿ ಆಗಸ್ಟ್ 2 ರಿಂದ ಪೆರೋಲ್​ ಮೇಲೆ ಹೊರಗಡೆ ಇದ್ದರು ಅಂತ ಗೊತ್ತಾಗಿದೆ. ಹಳೇ ಹುಬ್ಬಳಿ ಪೊಲೀಸ್ ಠಾಣೆಯಲ್ಲಿ ಫ್ರೂಟ್ಸ್ ಇರ್ಫಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಈತ. ಬೆಂಗಳೂರಿನ ಒಂದು ಕೊಲೆ ಪ್ರಕರಣ ಈತನ ಮೇಲಿದೆ. ಇನ್ನು ಹಲವರಿಗೆ ಬೆದರಿಕೆ ಕರೆ ಹೋಗಿದೆ ಅನ್ನೋದು ವಿಚಾರಣೆಯಲ್ಲಿ ತಿಳಿದಿದೆ. ಇದನ್ನ ಹೊರತು ಪಡಿಸಿ ಬೆದರಿಕೆ ಕರೆ ಬಂದರೆ ನಮಗೆ ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.