ಟ್ರೇಡಿಂಗ್‌ ಹೆಸ್ರಲ್ಲಿ ಕೋಟಿ ಕೋಟಿ ಗುಳುಂ; ಗುಜರಿ ವ್ಯಾಪಾರಿಗೆ ಖೋಟಾ ನೋಟು ಕೊಟ್ಟು ವಂಚನೆಗೆ ಯತ್ನ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿತ್ಯಾ ನೂರಾರು ವಂಚನೆ ಪ್ರಕರಣಗಳು ದಾಖಲಾಗುತ್ತಲೇ ಇರುತ್ತದೆ. ನಿವೃತ್ತ ಎಸಿಪಿ ಟೈಗರ್‌ ಅಶೋಕ್‌ ಹೆಸರಿನಲ್ಲಿ ನಕಲಿ ಫೇಸ್‌ ಬುಕ್‌ ಖಾತೆ ತೆಗೆದು ಹಣಕ್ಕೆ ಬೇಡಿಕೆ ಇಟ್ಟರೆ ಮತ್ತೊಂದು ಕಡೆ ಆನ್‌ಲೈನ್‌ ಟ್ರೇಡಿಂಗ್ ಹೆಸರಲ್ಲಿ ಸೈಬರ್ ವಂಚನೆ ನಡೆದಿದೆ. ಗುಜರಿ ವ್ಯಾಪಾರಿಗೆ ಖೋಟಾ ನೋಟು ಕೊಟ್ಟು ವಂಚನೆಗೆ ಯತ್ನಿಸಿ ಆರೋಪಿಗಳು ಕಾಲ್ಕಿತ್ತಿದ್ದಾರೆ. ಇ ಸಿಗರೇಟ್‌ ಮಾರಾಟ ಮಾಡುತ್ತಿದ್ದ ಖತರ್ನಾಕ್‌ ಕಳ್ಳರನ್ನು ಬಂಧಿಸಲಾಗಿದೆ.

ನಿವೃತ್ತ ಎಸಿಪಿ ಟೈಗರ್‌ ಅಶೋಕ್‌ ಹೆಸ್ರಲ್ಲಿ ನಕಲಿ ಫೇಸ್‌ ಬುಕ್‌

ಸೈಬರ್‌ ವಂಚಕರು ನಿವೃತ್ತ ಎಸಿಪಿ ಬಿ.ಬಿ.ಅಶೋಕ್ ಕುಮಾರ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದು ಹಲವರಿಗೆ ಮೆಸೇಜ್ ಮಾಡಿದ್ದಾರೆ. ಟೈಗರ್ ಅಶೋಕ್ ಕುಮಾರ್ ಹೆಸರು ಬಳಸಿ ಹಣ ಕೀಳಲು ಯತ್ನಿಸಿದ್ದಾರೆ. ಅಶೋಕ್ ಕುಮಾರ್ ಫೋಟೊ ಬಳಸಿ ನಕಲಿ ಅಕೌಂಟ್ ಓಪನ್ ಮಾಡಿ ಹಣಕ್ಕಾಗಿ ಮೆಸೇಜ್ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ಟೈಗರ್ ಅಶೋಕ್ ಕುಮಾರ್‌ ಅವರು ದೂರು ನೀಡಿದ್ದಾರೆ. ಜತೆಗೆ ನಕಲಿ ಖಾತೆಯಿಂದ ಯಾರಾದರೂ ಮೆಸೇಜ್ ಮಾಡಿ, ಹಣ ಕೇಳಿದರೆ ಯಾರು ಸ್ಪಂದಿಸಬೇಡಿ ಎಂದು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆನ್‌ಲೈನ್‌ ಟ್ರೇಡಿಂಗ್ ಹೆಸರಲ್ಲಿ ಸೈಬರ್ ವಂಚನೆ

ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಗಳ ಬಂಧನವಾಗಿದೆ. ಷೇರು ಮಾರುಕಟ್ಟೆಯಲ್ಲಿ ನಕಲಿ‌ ಕಂಪನಿಗಳ ಹೆಸರಲ್ಲಿ ಹಣಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ನಕಲಿ ದಾಖಲೆ ನೀಡಿ ಹತ್ತಾರು ಬ್ಯಾಂಕ್ ಅಕೌಂಟ್ ತೆರೆದಿದ್ದರು. ಹಣ ಟ್ರಾನ್ಸ್‌ಫರ್ ಆದ ನಂತರ ಬೇರೆ ಬೇರೆ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿಕೊಳ್ಳುತ್ತಿದ್ದರು. ನಂತರ ಹಣ ಜಮಾ ಮಾಡಿದವರ ನಂಬರ್ ಬ್ಲಾಕ್ ಮಾಡುತ್ತಿದ್ದರು. ಈ ಬಗ್ಗೆ ಬೆಂಗಳೂರು ಸೈಬರ್ ಠಾಣೆಗಳಲ್ಲಿ ಹತ್ತಾರು ದೂರು ದಾಖಲಾಗಿದ್ವು. ಕೋಟ್ಯಾಂತರ ರೂ. ಹಣ ಟ್ರಾನ್ಸ್‌ಫರ್ ಆಗಿದ್ದ ಹಿನ್ನೆಲೆಯಲ್ಲಿ ಸೈಬರ್‌ ಕ್ರೈಂ ಪೊಲೀಸರು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ಶಶಿಕುಮಾರ್, ಸಚಿನ್, ಕಿರಣ್, ಚರಣ್ ರಾಜ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತ ನಾಲ್ವರನ್ನು ಬೆಂಗಳೂರಿನ ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಏಳು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಗುಜರಿ ವ್ಯಾಪಾರಿಗೆ ಖೋಟಾ ನೋಟು ಕೊಟ್ಟು ವಂಚನೆ

ಬೆಂಗಳೂರಿನ ಗುಜುರಿ ವ್ಯಾಪಾರಿಗೆ ಖೋಟಾ ನೋಟಿನ ಮೂಲಕ ವಂಚನೆಗೆ ಯತ್ನಿಸಲಾಗಿದೆ. ಕಾಟನ್ ಪೇಟೆ ಗುಜುರಿ ವ್ಯಾಪಾರಿ ಕಾರ್ತಿಕ್ ಎಂಬುವವರು ದೆಹಲಿಗೆ ಗುಜುರಿ ವಸ್ತುಗಳನ್ನು ಕಳಿಸುವ ಬಿಜಿನೆಸ್ ಮಾಡುತ್ತಿದ್ದರು. ದೆಹಲಿಯಲ್ಲಿ ಕಾರ್ತಿಕ್ ವಹಿವಾಟು ಗಮನಿಸಿದ ಭರತ್ ಎಂಬಾತ ಪರಿಚಯವಾಗಿದ್ದ. ಕೆಲ ದಿನಗಳ ನಂತರ ಭರತ್‌ ತನಗೆ ದೆಹಲಿಯಲ್ಲಿ 20 ಲಕ್ಷ ರೂ. ಹಣ ತುರ್ತಾಗಿ ಬೇಕಾಗಿದೆ. ನಿಮಗೆ ಬೆಂಗಳೂರಿನಲ್ಲಿ‌ ನಮ್ಮ ಕಡೆಯವರು 20 ಲಕ್ಷ ರೂ. ಕೊಡುತ್ತಾರೆ. ದೆಹಲಿಯಲ್ಲಿ ನಿಮಗೆ ಪರಿಚಯದವರ ಕಡೆಯಿಂದ ನನಗೆ 20 ಲಕ್ಷ ಕೊಡಿಸಿ ಎಂದಿದ್ದ.

ಅದರಂತೆ ಭರತ್ ಕಡೆಯ ರಮಾಕಾಂತ್ ಎಂಬಾತನಿಂದ 20 ಲಕ್ಷ ಹಣ ಪಡೆಯಲು ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿ ಕಾರ್ತಿಕ್‌ ತೆರಳಿದ್ದರು. 500 ಮುಖಬೆಲೆಯ ಹತ್ತು ಬಂಡಲ್ ನೀಡಿದ್ದರು. ಆದರೆ ಬಂಡೆಲ್‌ ಮೇಲಿನ ಹಾಗೂ ಕೆಳಗಿನ ನೋಟು ಮಾತ್ರ ಅಸಲಿಯಾಗಿದ್ದು, ಒಳಗಿನ ಎಲ್ಲ ನೋಟು ವೈಟ್ ಪೇಪರ್ ಇಡಲಾಗಿತ್ತು. 500ರೂ.ಅಸಲಿ ನೋಟನ್ನು ಹೋಲುವಂತೆ ವೈಟ್ ಪೇಪರ್‌ನಲ್ಲಿ ನಕಲಿ ನೋಟು ಪ್ರಿಂಟ್ ಮಾಡಿದ್ದರು. ಇತ್ತ ರಮಾಕಾಂತ್ ಬಂಡೆಲ್ ಓಪನ್ ಮಾಡಲು ಬಿಡದಂತೆ ಪದೆಪದೇ ದೆಹಲಿಗೆ ಕರೆ ಮಾಡಿ ಹಣ ನೀಡುವಂತೆ ಕಾರ್ತಿಕ್‌ಗೆ ಸೂಚಿಸಿದ್ದ. ಇದರಿಂದ ಅನುಮಾನ ಬಂದು ಬಂಡೆಲ್ ಓಪನ್ ಮಾಡುತ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಿದ್ದ. ಸದ್ಯ ಕಾರ್ತಿಕ್‌ರಿಂದ ಭರತ್ ಹಾಗೂ ರಮಾನಂತ್ ಎಂಬುವವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರು ನಗರದಾದ್ಯಂತ ಇದೇ ರೀತಿ‌ ನಾಲ್ಕೈದು ವಂಚನೆಯಾಗಿರುವುದು ಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ಸಿಸಿಬಿಯಿಂದ ವಿಶೇಷ ತಂಡ ರಚನೆ ಮಾಡಲಾಗಿದೆ.

ಇ ಸಿಗರೇಟ್‌ ಸೀಜ್‌

ಜೆಜೆ ನಗರ ಪೊಲೀಸರು ಖತರ್ನಾಕ್ ಗ್ಯಾಂಗ್‌ನ ಕಳ್ಳಾಟವನ್ನು ಬೇಧಿಸಿದ್ದಾರೆ. ಏರ್‌ಪೋರ್ಟ್‌ನಲ್ಲಿ ವಿದೇಶದಿಂದ ಬರುವವರ ಬಳಿ ಇ-ಸಿಗರೇಟ್ ಸೀಜ್ ಮಾಡಲಾಗುತ್ತೆ. ಆದರೆ ಈ ರೀತಿ ಸೀಜ್ ಆದ ವಸ್ತುಗಳನ್ನು ಇತರೆ ವೇಸ್ಟ್ ಜತೆ ಹರಾಜು ಹಾಕಲಾಗುತ್ತದೆ. ಹರಾಜಿನಲ್ಲಿ ತೆಗೆದುಕೊಂಡ ವಸ್ತುಗಳನ್ನು ಜೆಜೆ ನಗರ ಠಾಣಾ ವ್ಯಾಪ್ತಿಯ ಗೋಡೌನ್‌ನಲ್ಲಿ ಶೇಖರಿಸಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಖದೀಮರು ಹರಾಜಿನಲ್ಲಿ ಬಂದ ಇ-ಸಿಗರೇಟ್‌ಗಳನ್ನು ವಿಂಗಡಿಸುತ್ತಿದ್ದರು. ಬಳಸಿದ ಇ -ಸಿಗರೇಟ್‌ಗಳನ್ನು 300-400 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ತಿಳಿದು ದಾಳಿ ನಡೆಸಿದ ಜೆಜೆ ನಗರ ಪೊಲೀಸರು, ಇಬ್ಬರು ಆರೋಪಿಗಳಿಂದ ಸುಮಾರು 110 ಇ- ಸಿಗರೇಟ್ ವಶಕ್ಕೆ ಪಡೆಯಲಾಗಿದೆ.