ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿ ಗುಡ್ ನ್ಯೂಸ್: ರಾಜ್ಯ, ಹೊರ ರಾಜ್ಯಗಳಿಗೆ 1500 ಹೆಚ್ಚುವರಿ ಬಸ್

ಬೆಂಗಳೂರು, ಸೆಪ್ಟೆಂಬರ್ 3: ಗೌರಿ ಮತ್ತು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಘೋಷಿಸಿದೆ. ಬೆಂಗಳೂರಿನಿಂದ ಸಾಮಾನ್ಯ ವೇಳಾಪಟ್ಟಿಯನ್ನು ಹೊರತುಪಡಿಸಿ ಅನೇಕ ಸ್ಥಳಗಳಿಗೆ ಹೆಚ್ಚುವರಿ 1,500 ವಿಶೇಷ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಘೋಷಿಸಿದೆ.

ಎಲ್ಲಿಗೆಲ್ಲ ವಿಶೇಷ ಬಸ್?

ಕೆಎಸ್‌ಆರ್‌ಟಿಸಿ ವಿಶೇಷ ಬಸ್​​ಗಳು ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಹಲವು ಪ್ರಮುಖ ಸ್ಥಳಗಳಿಗೆ ಸಂಚರಿಸಲಿವೆ. ತಿರುಪತಿ, ವಿಜಯವಾಡ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ವಿಜಯಪುರ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಬೀದರ್, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮತ್ತು ಹೈದರಾಬಾದ್ ಸೇರಿದಂತೆ ಇತರೆ ಕಡೆಗಳಿಗೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್​​ಗಳು ಸಂಚರಿಸಲಿದೆ.

ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ವಿಶೇಷ ಬಸ್‌ಗಳು ಪಿರಿಯಾಪಟ್ಟಣ, ವಿರಾಜಪೇಟೆ, ಮೈಸೂರು, ಹುಣಸೂರು, ಕುಶಾಲನಗರ ಮತ್ತು ಮಡಿಕೇರಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ತೆರಳಲಿವೆ ಎಂದು ಕೆಎಸ್ಆರ್​​ಟಿಸಿ ತಿಳಿಸಿದೆ.

ವಿಶೇಷ ಬಸ್​​ಗಳಿಗೆ ಟಿಕೆಟ್ ಬುಕಿಂಗ್ ಹೇಗೆ?

ವಿಶೇಷ ಹಾಗೂ ಹೆಚ್ಚುವರಿ ಬಸ್​ಗಳ ಪ್ರಯಾಣದ ಸಮಯ ಹಾಗೂ ದರದ ಬಗ್ಗೆ ಕೆಎಸ್‌ಆರ್‌ಟಿಸಿ ಮೊಬೈಲ್​ ಆ್ಯಪ್​ ಹಾಗೂ https://www.ksrtc.in/ ವೆಬ್​ಸೈಟ್​​ ಮೂಲಕ ಸಂಸ್ಥೆ ಮಾಹಿತಿ ನೀಡಲಿದೆ. ಇವುಗಳ ಮೂಲಕವೇ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಕರ್ನಾಟಕದಾದ್ಯಂತ ಬಸ್​​ ನಿಲ್ದಾಣಗಳಲ್ಲಿನ ಹಾಗೂ ನೆರೆ ರಾಜ್ಯಗಳ ಕೆಎಸ್‌ಆರ್‌ಟಿಸಿ ಕೌಂಟರ್​ಗಳ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಒಬ್ಬ ವ್ಯಕ್ತಿಯು ಒಂದು ಬುಕಿಂಗ್​ಗೆ 4 ಅಥವಾ 5 ಮಂದಿಗೆ ಟಿಕೆಟ್ ಕಾಯ್ದಿರಿಸಿದರೆ ಶೇ 5ರ ರಿಯಾಯಿತಿ ನೀಡುವುದಾಗಿಯೂ ಕೆಎಸ್‌ಆರ್‌ಟಿಸಿ ಘೋಷಿಸಿದೆ. ರಿಟರ್ನ್ ಟಿಕೆಟ್ ಕೂಡ ಒಟ್ಟಿಗೇ ಕಾಯ್ದಿರಿಸಿದರೆ ಶೇ 10ರ ರಿಯಾಯಿತಿ ದೊರೆಯಲಿದೆ.