ಹಾಸನದಲ್ಲಿ ನಕಲಿ ಆಧಾರ್ ತೋರಿಸಿ ಕೆಲಸ ಗಿಟ್ಟಿಸಿಕೊಳ್ಳುವ ಬಾಂಗ್ಲಾ ಅಕ್ರಮ ವಲಸಿಗರು – ತನಿಖೆ ವೇಳೆ ಬೃಹತ್ ಜಾಲ ಬಯಲು

ಹಾಸನ: ನಕಲಿ ದಾಖಲೆಗಳೊಂದಿಗೆ ಅಸ್ಸಾಂ ಮೂಲದವರೆಂದು ಕಾರ್ಮಿಕರ ರೂಪದಲ್ಲಿ ನೆರೆಯೂರುತ್ತಿರುವ ಬಗ್ಗೆ ಗಂಭೀರ ಆರೋಪ ಹಾಸನ ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ಕೇಳಿಬರುತ್ತಿದೆ.

ಕೂಲಿ ಕೆಲಸಗಾರರ ಸೋಗಿನಲ್ಲಿ ಬಾಂಗ್ಲಾದ ಅಕ್ರಮ ವಲಸಿಗರು ಅಸ್ಸಾಂ ಮೂಲದವರೆಂದು ಹೇಳಿಕೊಂಡು ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ವಿವಿಧೆಡೆ ಕೆಲಸದ ನೆಪ ಒಡ್ಡಿ ವಲಸೆ ಬರುತ್ತಿದ್ದರು. ಕಾರ್ಮಿಕರ ಕೊರತೆಯನ್ನು ಅರಿತುಕೊಂಡು ಅದನ್ನೇ ಬಂಡವಾಳ ಮಾಡಿಕೊಂಡ ಕೆಲವು ಏಜೆಂಟ್‌ರಿಂದ ನಕಲೆ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಿರುವುದು ಕೇಳಿ ಬಂದಿತ್ತು.

ನೂರಾರು ಸಂಖ್ಯೆಯಲ್ಲಿ ಅಪರಿಚಿತರು ರಾತ್ರೋರಾತ್ರಿ ಬಸ್ಸಿನಲ್ಲಿ ಬಂದಿಳಿದು, ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಕೆಲಸ ಹುಡುಕುತ್ತಿದ್ದರು. ಕೆಲ ಮಾಲೀಕರು ಯಾವುದೇ ದಾಖಲೆ ಪರಿಶೀಲನೆ ನಡೆಸದೇ ಕಾರ್ಮಿಕರೆಂಬ ಅನಿವಾರ್ಯತೆಯಿಂದಾಗಿ ಕೆಲಸ ನೀಡುತ್ತಿದ್ದರು. ವಲಸಿಗರು ಸಿಕ್ಕ ಸಿಕ್ಕ ಜಾಗದಲ್ಲಿ ಗುಡಿಸಲು ಹಾಕಿಕೊಂಡು ನೆಲೆಸುತ್ತಿರುವುದನ್ನು ಕಂಡು ಜನರಲ್ಲಿ ಅನುಮಾನ ಹೆಚ್ಚಾಗಿತ್ತು. ಸಾವಿರ ಸಂಖ್ಯೆಯಲ್ಲಿ ವಲಸಿಗರು ಬರುತ್ತಿರುವ ಹಿನ್ನೆಲೆ ಅವರ ಬಗ್ಗೆ ನಿಗಾವಹಿಸುವಂತೆ ಜನರು ಆಗ್ರಹಿಸಿದ್ದರು.

ಈ ಆರೋಪದ ಬೆನ್ನಲ್ಲೇ ಆಧಾರ್ ವಿಭಾಗದ ಅಧಿಕಾರಿಗಳು ಬೃಹತ್ ಜಾಲದ ಮಾಹಿತಿಯೊಂದು ಬಯಲು ಮಾಡಿದ್ದಾರೆ. 5 ರಿಂದ 10 ಸಾವಿರ ರೂ. ಹಣ ಪಡೆದು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡುತ್ತಿರುವ ಕುರಿತು ಮಾಹಿತಿಯು ಹೊರಬಿದ್ದಿದೆ.

ಅಕ್ರಮ ವಲಸಿಗರು ಬರುತ್ತಿರುವ ಆರೋಪದ ಹಿನ್ನೆಲೆ ಬೆಂಗಳೂರು ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಒಂದೇ ದಾಖಲೆ ಬಳಸಿ ದಿನಾಂಕ, ಹೆಸರು ಬಳಸಿ ಹತ್ತಾರು ಆಧಾರ್ ವಿತರಣೆ ಮಾಡಿರುವುದು ಬಯಲು ಮಾಡಿ ಶಾಕಿಂಗ್ ಮಾಹಿತಿ ಬಯಲಿಗೆಳಿದಿದ್ದಾರೆ.

ಹಾಸನದ ಡಿಸಿ ಕಛೇರಿಯ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅನುಶ್ರೀ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಸಿ ಸಿ.ಸತ್ಯಭಾಮ ಎದುರೇ ನಕಲಿ ಆಧಾರ್ ವಿತರಣೆ ಮಾಡಿರುವ ಕುರಿತು ಆಧಾರ್ ವಿತರಣೆ ವಿಭಾಗೀಯ ಅಧಿಕಾರಿ ವಿಜಯ್ ಕುಮಾರ್ ರಿವೀಲ್ ಮಾಡಿದ್ದಾರೆ. ನಕಲಿ ಆಧಾರ್ ನೀಡಿರುವ ಮಹಿಳೆಯ ವಿರುದ್ದ ಕೇಸ್ ದಾಖಲಿಸಿ, ತನಿಖೆ ನಡೆಸುವಂತೆ ಡಿಸಿ ಸೂಚನೆ ನೀಡಿದ್ದಾರೆ.