ತಂಬಾಕು ಸಲುವಾಗಿ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಗಲಾಟೆ: ಇಬ್ಬರಿಗೆ ಗಾಯ

ಉತ್ತರ ಕನ್ನಡ: ನಟ ದರ್ಶನ ಇದ್ದ ಪರಪ್ಪನ ಅಗ್ರಹಾರದ ಅವ್ಯವಸ್ಥೆ ಹೊರಬರುತ್ತಿದ್ದಂತೆ ಕಾರವಾರ ಜಿಲ್ಲಾ ಕಾರಗೃಹದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ತಂಬಾಕು ಸೇರಿ ಇತರೆ ವಸ್ತುಗಳನ್ನು ನಿಷೇಧಿಸಲಾಗಿತ್ತು. ಇದೇ ವಿಚಾರವಾಗಿ ತಂಬಾಕು ಏಕೆ ಕೊಡುತ್ತಿಲ್ಲ ಎಂದು ಕೈದಿಗಳು ಭಾರಿ ಗಲಾಟೆ ಮಾಡಿರುವಂತಹ ಘಟನೆ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ನಿಷೇಧ ಮಾಡಲಾಗಿದ್ದರು ತಂಬಾಕು ಏಕೆ ಕೊಡುತ್ತಿಲ್ಲ ಅಂತಾ ಕೈದಿಗಳಿಂದ ಗಲಾಟೆ ಮಾಡಲಾಗಿದೆ. ಜೈಲರ್ ಮಹೇಶಗೌಡ್​ ಸುಮ್ಮನಿರಿಸಿದ್ದಕ್ಕೆ ರೊಚ್ಚಿಗೆದ್ದು ನಾಲ್ವರು ಕೈದಿಗಳ ಮಧ್ಯೆ ಮಾರಾಮಾರಿ ನಡೆದು ಇಬ್ಬರ ಪೈಕಿ ಓರ್ವ ಕೈದಿ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವ ಉಂಟಾಗಿದೆ.

ಫರಾನ್ ಛಬ್ಬಿ ಹಾಗೂ ಮುಜಾಮಿಲ್ ಇಬ್ಬರಿಗೂ ಗಾಯಗಳಾಗಿದ್ದು, ಚಿಕಿತ್ಸೆಗೆ ಕೈದಿಗಳನ್ನ ಜಿಲ್ಲಾಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದಾರೆ. ಘಟನೆಯಿಂದಾಗಿ ಕಾರಗೃಹಕ್ಕೆ ಎ.ಎಸ್ಪಿ ಜಯಕುಮಾರ, ಡಿ ಎಸ್ ಪಿ ಗಿರೀಷ್ ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಪೊಲೀಸರು ಜಮಾವಣೆಗೊಂಡಿದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ ಹೇಳಿದ್ದಿಷ್ಟು 

ಘಟನೆ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಾರಗೃಹ ಬಳಿಕ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ ಮಾಧ್ಯಮದವರೊಂದಿಗೆ ಮಾತನಾಡಿದ್ದು, ತಂಬಾಕು ಉತ್ಪನ್ನಗಳನ್ನು  ನಿಷೇಧ ಮಾಡಲಾಗಿತ್ತು. ಹಾಗಾಗಿ ನಮಗೆ ತಂಬಾಕು ಕೊಡಲೆಬೇಕೆಂದು ಕೈದಿಗಳು ಮಧ್ಯಾಹ್ನ 2 ಗಂಟೆಗೆ ಗಲಾಟೆ ಮಾಡಿದಾರೆ ಎಂದು ಹೇಳಿದ್ದಾರೆ.

ಅವರು ಎಷ್ಟೆ ಕೇಳಿಕೊಂಡ್ರು ತಂಬಾಕು ಕೊಡದ ಹಿನ್ನೆಲೆ ತಮ್ಮ ತಲೆಯನ್ನು ಕಲ್ಲಿಗೆ ಹೊಡೆದುಕೊಂಡು ಗಾಯ ಮಾಡಿಕೊಂಡಿದ್ದಾರೆ. ಫರಾನ್ ಮತ್ತು ಮುಜಾಮಿಲ್ ಇಬ್ಬರ ತಲೆಗೆ ಗಾಯ ಆಗಿದೆ. ತಲೆಗೆ ಗಾಯ ಮಾಡಿಕೊಂಡು ಜೈಲರ್ ಮೇಲೆ ದೂರು ಕೊಡುವುದಕ್ಕೆ ಬಂದರು. ನಾನು ಸಿಸಿ ಟಿವಿ ಪರಿಶೀಲಿಸಿದಾಗ ಇವರೆ ತಲೆಗೆ ಹೊಡೆದುಕೊಂಡಿರುವುದು ತಿಳಿದು ಬಂದಿದೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಇಬ್ಬರ ಮೇಲೆ ಜೈಲರ್​​ ದೂರು ಕೊಟ್ಟಿದ್ದಾರೆ. ಇಬ್ಬರು ಕೈದಿಗಳ ವಿರುದ್ಧ ಕೇಸ್ ದಾಖಲಿಸಿಕೊಳ್ಳಾಗಿದೆ ಎಂದಿದ್ದಾರೆ.