ಪಾನ್‌ಶಾಪ್‌ಗೆ ಬಂದವನ ಮೇಲೆ ಅಟ್ಯಾಕ್‌; ಸಿಕ್ಕ ಸಿಕ್ಕಂತೆ ಕೊಡಲಿಯಿಂದ ಹಲ್ಲೆ

ಹಾವೇರಿ: ಹಾವೇರಿಯಲ್ಲಿ ಕಳ್ಳತನದ ಆರೋಪಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು, ಗಾಯಾಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ನಾಗೇಂದ್ರನಮಟ್ಟಿಯ ನಿವಾಸಿ ಸುದೀಪ್ ಎಂಬಾತನ ಮೇಲೆ ಹಲ್ಲೆ ನಡೆದಿದೆ.

ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಹಾವೇರಿಯ ವೀರಾಪುರ ಆಸ್ಪತ್ರೆ ಬಳಿ ಸುದೀಪ್‌ ಮೇಲೆ ಕೊಡಲಿ, ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಮಧ್ಯರಾತ್ರಿ ಪಾನ್ ಶಾಪ್‌ಗೆ ಬಂದಿದ್ದ ಸುದೀಪ್ ಮೇಲೆ ಬೈಕ್‌ನಲ್ಲಿ ಬಂದಿದ್ದ ಐದಾರು ಜನರ ತಂಡದಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಕೊಡಲಿಯಿಂದ ತಲೆ, ಕುತ್ತಿಗೆ ಸೇರಿ ಹಲವು ಕಡೆ ಹೊಡೆದಿದ್ದಾರೆ. ಮಾರಕಾಸ್ತ್ರಗಳಿಂದ ಹೊಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾವೇರಿ ಶಹರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಬ್ದುಲ್, ರೆಬೆಲ್, ಬಬಲು, ಅಲ್ಲು, ಸಾಹಿಲ್ ಹಾಗೂ ಮತ್ತೋರ್ವನ ಮೇಲೆ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.