ಖಾಕಿ ಕಂಡು ಕಾಲ್ಕಿತ್ತಿದ ಕಳ್ಳರು: ಸಿನೀಮಿಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದ ಪೊಲೀಸರು

ಬಾಗಲಕೋಟೆ, ಆಗಸ್ಟ್​​ 05: ಸಿನೀಮಿಯ ರೀತಿಯಲ್ಲಿ ಚೇಸ್ ಮಾಡುವ ಮೂಲಕ ಇಬ್ಬರು ಅಂತಾರಾಜ್ಯ ಕಳ್ಳರನ್ನು ಇಳಕಲ್​ ಹಾಗೂ ಹುನಗುಂದ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಪರಾರಿ ಆಗಲು ಕಳ್ಳರು ಮಾಡಿದ ಎಲ್ಲಾ ಪ್ಲ್ಯಾನ್​ ತಲೆಕೆಳಗಾಗಿದೆ. ಆಂಧ್ರಪ್ರದೇಶದ ಅನಂತಪುರದಲ್ಲಿ ಗ್ಯಾಸ್ ಕಟಟ್​ನಿಂದ ಎಟಿಎಂನಲ್ಲಿದ್ದ ಹಣವನ್ನು ಕಳ್ಳರ ಗ್ಯಾಂಗ್ ದೋಚಿದ್ದರು. ಕಳ್ಳರು ಅನಂತಪುರದಿಂದ ಕರ್ನಾಟಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಇತ್ತು.

ಹುನಗುಂದ, ಇಳಕಲ್​ ಎನ್​ಹೆಚ್ 50ರಲ್ಲಿ ಹೋಗುವ ದೆಹಲಿ ಪಾಸಿಂಗ್ ವಾಹನ ತಪಾಸಣೆ ಮಾಡಲು ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಸೂಚಿಸಿದ್ದಾರೆ. ಅವರ ಆದೇಶದ ಮೇರಿಗೆ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ಮಾಡಿದ ಪೊಲೀಸರು ಹುನಗುಂದ ಮಾರ್ಗವಾಗಿ ವಿಜಯಪುರಕ್ಕೆ ಹೋಗುವ ದಾರಿಯ ಬೆಳಗಲ್ ಚೆಕ್ ಪೋಸ್ಟ್​ನಲ್ಲಿ ವಾಹನ ತಡೆದು ತಪಾಸಣೆ ಮಾಡಿದ್ದಾರೆ.

ಈ ವೇಳೆ ಅದೇ ಮಾರ್ಗದಲ್ಲಿ ಬಂದ ಕಳ್ಳರ ಗ್ಯಾಂಗ್​ ಪೊಲೀಸರನ್ನು ಕಂಡು ಜಾಗೃತರಾಗಿ ವಾಹನ ಹಿಂತಿರುಗಿಸಿದ್ದಾರೆ. ಹುನಗುಂದ ಮಾರ್ಗದ ಧನ್ನೂರು-ಮುದ್ದೇಬಿಹಾಳದ ಅಡ್ಡದಾರಿ ಹಿಡಿದು ಪರಾರಿ ಆಗಲು ಯತ್ನಿಸಿದ್ದಾರೆ. ಅವರನ್ನು ಬೆನ್ನುಹತ್ತಿದ ಹೈವೇ ಪೊಲೀಸರು ಚೇಸ್​ ಮಾಡಿದ್ದಾರೆ. ಈ ವೇಳೆ ಪೊಲೀಸ್ ವಾಹನಕ್ಕೆ ಕಳ್ಳರ ವಾಹನ ಡಿಕ್ಕಿ ಹೊಡೆದಿದೆ. ಹೀಗಾಗಿ ವಾಹನ ಬಿಟ್ಟು ಕಳ್ಳರು ಹೊಲದಲ್ಲಿ ಓಡಿ ಹೋಗಿದ್ದಾರೆ.

ಅತ್ತ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ನೆರವು ಪಡೆದ ಪೊಲೀಸ್​ ಕಳ್ಳರು ಹೈವೇಗೆ ಬರುವಂತೆ ಮಾಡಿದ್ದಾರೆ. ಕಳ್ಳರು ಹೈವೆಗೆ ಬರ್ತಿದ್ದಂತೆ ಸುತ್ತುವರೆದು ಇಬ್ಬರು ಕಳ್ಳರನ್ನು ಪೊಲೀಸ್ ತಂಡ ಬಂಧಿಸಿದೆ. ಸದ್ಯ ಹುನಗುಂದ ಠಾಣೆಗೆ ಆಂಧ್ರ ಪೊಲೀಸರು ಆಗಮಿಸಿದ್ದು, ಕಳ್ಳರನ್ನ ಆಂಧ್ರಕ್ಕೆ ಕರೆದೊಯ್ಯಲಿದ್ದಾರೆ.