ಮೌಢ್ಯಾಚರಣೆ: ಭಕ್ತರಿಗೆ ಕೊಡಲಿ ಏಟು, ಪೂಜಾರಿ ಅರೆಸ್ಟ್​

ಬಾಗಲಕೋಟೆ, ಜುಲೈ 13: 21ನೇ ಶತಮಾನದಲ್ಲಿ ನಾವಿದ್ದೇವೆ. ಅಧುನಿಕತೆ ಎಷ್ಟೇ ಮುಂದುವರಿದರೂ ಮೌಢ್ಯತೆ ಮಾತ್ರ ಇಂದಿಗೂ ಮರೆಯಾಗಿಲ್ಲ. ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮೌಢ್ಯಾಚರಣೆ, ಮೂಡನಂಬಿಕೆಗಳ ಆಚರಣೆ ಕಾಣಸಿಗುತ್ತವೆ. ಇದೀಗ ಆ ಜಿಲ್ಲೆಗಳಲ್ಲಿ ಬಾಗಲಕೋಟೆ ಕೂಡ ಸೇರಿಕೊಂಡಿದೆ. ಇದೀಗ ಜಿಲ್ಲೆಯ ಮುಧೋಳ‌ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಮೌಢ್ಯಾಚರಣೆ ಮಾಡಲಾಗುತ್ತಿದೆ. ಭಕ್ತರ ಹೊಟ್ಟೆಗೆ ಕೊಡಲಿಯಿಂದ ಜಕ್ಕಪ್ಪ ಗಡ್ಡದ ಎಂಬ ಪೂಜಾರಿ ಹೊಡೆಯುವ ದೃಶ್ಯ ಎಂತವರನ್ನು ಭಯ ಬಿಳಿಸುತ್ತದೆ. ಸದ್ಯ ಮೂಢನಂಬಿಕೆ ನಿಷೇಧ ಕಾಯ್ದೆಯಡಿ ದೇಗುಲದ ಪೂಜಾರಿಯನ್ನು ಅರೆಸ್ಟ್ ಮಾಡಲಾಗಿದೆ.​

ಮುಧೋಳ‌ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಕಾಶಿಲಿಂಗೇಶ್ವರ ದೇವಸ್ಥಾನದ ಪೂಜಾರಿಯಿಂದ ಮೌಢ್ಯಾಚರಣೆ ನಡೆದಿದೆ. ಮೈ, ಕೈ, ನೋವು ಅಂತಾ ಪೂಜಾರಿ ಬಳಿ ಬರುವ ಭಕ್ತರಿಗೆ ನೋವಾಗುವ ಭಾಗಕ್ಕೆ ಭಂಡಾರ ಹಚ್ಚಿ ಕೊಡಲಿಯಿಂದ ಹೊಡೆಯಲಾಗುತ್ತದೆ. ಹೀಗೆ ಕೊಡಲಿಯಿಂದ ಹೊಡೆದರೆ ಗುಣಮುಖವಾಗುತ್ತೆ ಎಂಬುವುದು ಭಕ್ತರ ಮೂಢನಂಬಿಕೆ ಆಗಿದೆ.

ಇದೀಗ ಪೂಜಾರಿ ಓರ್ವ ಭಕ್ತನಿಗೆ ಕೊಡಲಿ ಏಟು ನೀಡುವ ದೃಶ್ಯ ವೈರಲ್ ಆಗಿದೆ. ವೈರಲ್​ ಆದ ವಿಡಿಯೋದಲ್ಲಿ ನೆಲದ ಮೇಲೆ ಓರ್ವ ಭಕ್ತ ಮಲಗಿಕೊಂಡಿದ್ದು, ಪೂಜಾರಿ ಭಕ್ತನ ಬೆನ್ನಿಗೆ ಜೋರಾಗಿ ಕೊಡಲಿಯಿಂದ ಹೊಡೆಯಲಾಗುತ್ತಿದೆ.

ಲೋಕಾಪುರ ಠಾಣೆಯಲ್ಲಿ ಪೂಜಾರಿ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಬಾಗಲಕೋಟೆ ಪೊಲೀಸ್​ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನು ಇತ್ತೀಚೆಗೆ ಚಾಮರಾಜನಗರದಲ್ಲಿ ಇಂತಹದೆ ಒಂದು ಘಟನೆ ನಡೆದಿತ್ತು. ಮನೆಯೊಳಗೆ ನಿಧಿ ಎಂಬ ಕೇರಳದ ಜೋತಿಷಿಯೊಬ್ಬರ ಮಾತು ಕೇಳಿದ್ದ ವ್ಯಕ್ತಿ ನಡು ಮನೆಯಲ್ಲಿ ಬಾವಿ ತೊಡಿದ್ದ. ಸತತ 10 ದಿನಗಳ ಕಾಲ ಬಾವಿ ತೊಡಿರುವ ಕುಟುಂಬ ಗ್ರಾಮದ ಯಾರಿಗೂ ಒಂಚೂರು ಅನುಮಾನ ಬಾರದ ರೀತಿ ನಡೆದು ಕೊಂಡಿದ್ದ. ನಡು ಮನೆಯಲ್ಲಿ ತೆಗೆದ ಗುಂಡಿಯ ಮಣ್ಣನ್ನ ಅಡುಗೆ ಮನೆಯಲ್ಲಿಯೇ ರಾಶಿ ಮಾಡಿದ್ದ. ಆತ ಮಾಡಿದ ಗನಂಧಾರಿ ಕೆಲಸವನ್ನ ನೋಡಲು ಇಡೀ ಊರಿಗೆ ಊರೇ ಬೆಚ್ಚಿಬಿದ್ದಿತ್ತು.