ಪದವಿ ವಿದ್ಯಾರ್ಥಿಗಳಿಗೆ ರಜೆ ಏಕಿಲ್ಲ?

ಅಂಕೋಲಾ ಆಗಸ್ಟ್‌ 01: ನಿರಂತರ ಮಳೆಗೆ ಜಿಲ್ಲಾಡಳಿತ ಪದವಿ ಪೂರ್ವ ಹಂತದವರೆಗಿನ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಣೆ ಮಾಡುತ್ತಿದೆ. ಇದರಿಂದಾಗಿ ಶೈಕ್ಷಣಿಕ ಅವಧಿ ಮತ್ತು ಪರೀಕ್ಷೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದಾಗ್ಯೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗೆ ರಜೆ ನೀಡುವುದು ಸ್ವಾಗತಾರ್ಹ. ಆದರೆ ಪದವಿ ಪೂರ್ವ ಹಂತದ ನಂತರದ ವಿದ್ಯಾರ್ಥಿಗಳಿಗೆ ಮಾತ್ರ ರಜೆ ಇಲ್ಲವಾಗಿದೆ. ನರ್ಸಿಂಗ್ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಪ್ರಯಾಸ ಪಡುತ್ತಿದ್ದಾರೆ.

ಕರ್ನಾಟಕ ವಿಶ್ವ ವಿದ್ಯಾಲಯದ ಅಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಬೇಕಿದೆ. ವಿಪರೀತ ಮಳೆ ಗಾಳಿಯಿದ್ದು ಪ್ರವಾಹದ ಭೀತಿಯೂ ಇದೆ. ಆದಾಗ್ಯೂ ಧಾರವಾಡ ಜಿಲ್ಲೆಯ ಕೇಂದ್ರ ಸ್ಥಾನ ಹೊಂದಿರುವ ಕರ್ನಾಟಕ ವಿಶ್ವ ವಿದ್ಯಾಲಯದ ಆಡಳಿತ ಅಧಿಕಾರಿಗಳಿಗೆ ಇಲ್ಲಿನ ಪರಿಸ್ಥಿತಿ ಅರಿವಾಗುತ್ತಿಲ್ಲ. ಪದವಿ ವಿದ್ಯಾರ್ಥಿಗಳು ಎದುರಿಸುವ ತೊಂದರೆಯ ಬಗ್ಗೆಯೂ ತಿಳಿದಿಲ್ಲ.

ಜಿಲ್ಲೆಯ ಪದವಿ ಕಾಲೇಜುಗಳ ಪ್ರಾಚಾರ್ಯರು ಮಳೆಯ ಸ್ಥಿತಿಗತಿಯ ಬಗ್ಗೆ ಅಧಿಕಾರಿಗೆ ಮಾಹಿತಿ ನೀಡಿ ಭಾರೀ ಪ್ರಮಾಣದ ಮಳೆಯಾದಾಗ ವಿದ್ಯಾರ್ಥಿಗಳಿಗೆ ರಜೆ ನೀಡಬೇಕು ಎಂದು ವಿದ್ಯಾರ್ಥಿಗಳ ಪಾಲಕರೊಬ್ಬರು ಒತ್ತಾಯ ಮಾಡಿದ್ದಾರೆ. ಪದವಿ ವಿದ್ಯಾರ್ಥಿಗಳಿಗೆ ರಜೆ ಇಲ್ಲದ ಕುರಿತು ವಾಟರ್ ಪ್ರೂಫ್ ವಿದ್ಯಾರ್ಥಿಗಳೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ..